ಈಗ ಎಲ್ಲೆಲ್ಲೂ ‘ಕಾಂತಾರ’ದ್ದೇ ಮಾತು. ಯಾರು ಸಿಕ್ಕರೂ ‘ಹೇಗಿದ್ದೀರಿ? ತಿಂಡಿ ಆಯ್ತಾ’ ಇತ್ಯಾದಿ ಕುಶಲೋಪರಿಯ ಮಾತುಕತೆಗಳಿಲ್ಲ. ‘ಕಾಂತಾರ ನೋಡಿದ್ರ’ ? ಎಂದೇ ಮಾತು ಆರಂಭವಾಗುತ್ತದೆ. ಒಂದು ಸಿನಿಮಾ ಅಷ್ಟರ ಮಟ್ಟಿಗೆ ಜನಮಾನಸವನ್ನು ತಲುಪಿದೆ ಅಂದ್ರೆ ಅದರ ಒಟ್ಟು ಸಂಗತಿಗಳು ಎಷ್ಟು ಬಿಗಿಯಾಗಿರಬಹುದೆಂದು ಊಹಿಸಿ. ಇನ್ನೇನು ಒಂದು ತಿಂಗಳಲ್ಲಿ ಕೋಲ, ನೇಮ ಆರಂಭವಾಗುವ ಕಾಲ. ಈ ಸಿನೆಮಾ ದೈವಾರಾಧಕರು, ದೈವ ನರ್ತಕರ ಕುರಿತು ನಮಗಿರುವ ಗೌರವ ದುಪ್ಪಟ್ಟಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ
ಬಾಲ್ಯದಿಂದಲೂ ದೈವಾರಾಧನೆ ಬಗ್ಗೆ ನನಗಿರುವ ಆಸಕ್ತಿ ಕುರಿತು ಹಿಂದಿನ ಎರಡು ಲೇಖನಗಳಲ್ಲಿ ನೀವು ಗಮನಿಸಿರಬಹುದು. ಈ ಲೇಖನ ಹುಟ್ಟಿಕೊಂಡಿದ್ದೂ ಒಂದು ವಿಶೇಷ. ಉಡುಪಿಯ ಪಡುಅಲೆವೂರಿನಿಂದ 10 ಕಿ. ಮೀ ಎಡಕ್ಕೆ ಸಾಗಿದರೆ ಮರ್ಣೆ ಎನ್ನುವ ಪುಟ್ಟ ಊರು. ಅಲ್ಲೊಂದು ‘ಧರ್ಮಚಾವಡಿ’ . ಈ ಚಾವಡಿಯಲ್ಲಿ ತಾಯಿ ಮಂತ್ರದೇವತೆ ಮತ್ತು ಕಲ್ಲುರ್ಟಿಯ ಆರಾಧನೆ ಮಾಡಿಕೊಂಡು ಬರುತ್ತಿರುವವರು ಶ್ರೀ ಕುಮಾರ ಪಂಬದ (Kumara Pambada). ಇವರು ಕಟ್ಟುವ ಕೋಲ, ನೇಮವನ್ನು ಪ್ರತ್ಯಕ್ಷ ಕಂಡಿದ್ದು ಮಾತ್ರವಲ್ಲ Youtube ನಲ್ಲೂ ಸಾಕಷ್ಟು ವಿಡಿಯೋಗಳನ್ನು ಕಂಡ ನನಗಿವರ ಪರಿಚಯ ಆಗಿ 2.5 ವರ್ಷ ಕಳೆಯಿತು. ಮೊನ್ನೆ ಅಗೆಲು ಸೇವೆಗೆ ಹೋಗಿದ್ದಾಗ ಎಲ್ಲಾ ಮುಗಿಸಿ ಹೊರಟಾಗ ‘ ಅವಿನಾಶ್ ರೇ ನಾಳೆ ಬನ್ನಿ, Free ಇದ್ದೇನೆ, ಮಾತಾಡುವ’ ಎಂದ್ರು. ದೈವಾರಾಧನೆ ಕುರಿತು ಹಲವು ಹೊಸ ವಿಚಾರಗಳನ್ನು ಅವರಿಂದ ತಿಳಿಯುತ್ತಿರುವಾಗಲೇ ‘ಕಾಂತಾರ’ ಸಹಜವಾಗಿ ಮಧ್ಯ ಬಂತು. ಪ್ರಶ್ನೆಗೆ ಪ್ರಶ್ನೆ ಬೆಳೆಯಿತು. ಅದಕ್ಕವರಿಂದ ಅರ್ಥಪೂರ್ಣ ಉತ್ತರವೂ ಬಂತು. ಎಲ್ಲೆಲ್ಲೂ ಕಾಂತರವೇ ಸುದ್ದಿಯಲ್ಲಿರುವಾಗ ಬರೆಯುವುದು ಸೂಕ್ತ ಅಂತನಿಸಿತು. ನಮ್ಮ ಮಾತು ಕತೆ ಹೀಗಿತ್ತು. ಅದಕ್ಕೂ ಮುನ್ನ …
ಕುಮಾರ ಪಂಬದ ಯಾರು ?

ಗೆಳೆಯರು, ಅಭಿಮಾನಿಗಳ ಬಳಗದಲ್ಲಿ ಇವರು ಕುಮಾರಣ್ಣ ಎಂದೇ ಹೆಸರುವಾಸಿ. ಹಿರಿಯರೂ ಹೆಚ್ಚಾಗಿ ಕುಮಾರಣ್ಣ ಎಂದೇ ಸಂಬೋಧಿಸುತ್ತಾರೆ. ದೈವ ಚಾಕರಿಗೆ ತಮ್ಮ ಬದುಕನ್ನು ಸಮರ್ಪಿಸಿದ ಇವರು ಕುಟ್ಟಿ ಮತ್ತು ದೇವಕಿ ಪಂಬದ ದಂಪತಿಯ ಜ್ಯೇಷ್ಠ ಪುತ್ರ. ಸುಮಾರು 25 ವರ್ಷಗಳಿಂದ ಧರ್ಮ, ನಿಯಮ ನಿಷ್ಠೆಯಿಂದ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಆಧ್ಯಾತ್ಮಿಕ , ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಆಸಕ್ತಿ. ಒಂದು ಗ್ರಾಮದವರೆಲ್ಲರೂ ಸೇರಿ ದೈವವನ್ನು ನಂಬಿದರೆ ಅದಕ್ಕೆ ‘ ರಾಜನ್ ದೈವ ‘ ಎಂದು ಹೆಸರು. ಹೀಗೆ ಪಂಜುರ್ಲಿ, ಜುಮಾದಿ, ಜಾರಂದಾಯ, ಕೊಡಮಣಿತ್ತಾಯ, ಉಳ್ಳಾಯ, ಮೈಸಂದಾಯ ಇತ್ಯಾದಿ ದೈವಗಳಿಗೆ ಕೋಲ ಕಟ್ಟುವ ಕುಮಾರಣ್ಣನ ನರ್ತನ, ಆವೇಶವನ್ನು ಸೂಕ್ಶ್ಮವಾಗಿ ಗಮನಿಸಿದರೆ ಎಂಥವರೂ ಭಕ್ತಿ, ಭಾವಪರವಶರಾಗುತ್ತಾರೆ.

ಕಾಂತಾರ ನೋಡಿದ್ರಾ ? ನಿಮ್ಮ ಅಭಿಪ್ರಾಯ?
ಒಳ್ಳೆಯ ಸಿನಿಮಾ. ಇದು ಸಾಮಾನ್ಯ ಪ್ರಯತ್ನ ಅಲ್ಲ. ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಹೇಳುವುದಾದರೆ ಶೇಕಡಾ 1 ರಷ್ಟು ನನಗೆ ಸ್ವಲ್ಪ ಬೇಸರವಿದೆ ಆದರೆ ಉಳಿದೆಲ್ಲಾ ವಿಚಾರಗಳು ಸಕಾರಾತ್ಮಕ ಸಂಗತಿಗಳೇ ಆಗಿರುವ ಕಾರಣ ನನ್ನ ಬೇಸರದ ಆ ಅಂಶ ನಗಣ್ಯ.
ಖುಷಿ ಯಾಕೆ ?
ಯಾಕಂದ್ರೆ ಪಂಜುರ್ಲಿ ದೈವ ಮತ್ತು ದೈವಾರಾಧನೆಯ ಕುರಿತು ಅತ್ಯಂತ ಸೊಗಸಾಗಿ ಇಡೀ ವಿಶ್ವಕ್ಕೆ ಪರಿಚಯಿಸಿದರು. ಸಿನಿಮಾ ಒಂದು ಪ್ರಭಲ ಮಾಧ್ಯಮ. ಅದನ್ನು ಜನರು ಪ್ರೀತಿಸಿ ಒಪ್ಪಿಕೊಳ್ಳುತ್ತಾರೆ. ನಮ್ಮ ದೈವದ ಶಕ್ತಿ ಏನೆಂದು ಪ್ರಶ್ನೆ ಮಾಡುವವರಿಗೆ ಸ್ಪಷ್ಟ ಉತ್ತರ ಈ ಸಿನಿಮಾ ನೀಡಿತು. ದೈವ ಚಾಕರಿ ಮಾಡುವ ಎಲ್ಲರಿಗೂ ಗೌರವ ಹೆಚ್ಚಾಯಿತು. ಇನ್ನು ಮುಂದೆ ನಡೆಯುವ ಪಂಜುರ್ಲಿ, ಗುಳಿಗ ಕೋಲಗಳಿಗೆ ವಿಶೇಷ ಮೆರುಗು ಬರಬಹುದು. ಅಲ್ಲಿ ಇಲ್ಲಿ ನಿಂತು ಹೋಗಿರುವ ದೈವಾರಾಧನೆಗೆ ಮತ್ತೆ ಜೀವ ಬರಬಹುದು, ಬಂದಿದೆ ಕೂಡ.

ಬೆಂಗ್ರೆ ಎಂಬಲ್ಲಿ ನಾಲ್ಕೈ ಪಂಜುರ್ಲಿ ದೈವಸ್ಥಾನ ಇದೆ. ಅಲ್ಲಿ 5 ವರ್ಷಗಳಿಗೊಮ್ಮೆ ನೇಮ ನಡೆಯುತ್ತಿತ್ತು. ಈಗ ಅಲ್ಲಿನವರು ವರ್ಷಕ್ಕೊಮ್ಮೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಸಿನಿಮಾ ಬಿಡುಗಡೆಗೊಂಡ ನಂತ್ರ ಆಗಿರುವ ಬೆಳವಣಿಗೆ. ನನ್ನ Diary ನೋಡಿ, ಈ ವರ್ಷ ನನಗೆ ಹೊಸದಾಗಿ 7 ಪಂಜುರ್ಲಿ ಕೋಲ ನಡೆಸಿಕೊಡಬೇಕೆಂಬ ಹೇಳಿಕೆ ಇದೆ.
ಬೇಸರ ಯಾಕೆ ?
ಅಂಥಾದ್ದೇನಿಲ್ಲ. ಸಣ್ಣ ವಿಚಾರ. ಅಲ್ಲಿ ಗಗ್ಗರ, ಅರದಳ, ವೇಷಭೂಷಣ ಮತ್ತು ಕೋಲದ ಆಚರಣೆಗಳನ್ನು ಸಂಪೂರ್ಣ ಬಳಸಿಕೊಂಡಿದ್ದಾರೆ. ದೈವಾರಾಧನೆ ಎನ್ನುವುದು ಒಂದು ಸೀಮಿತ ಸಮುದಾಯಕ್ಕೆ ಸೇರಿರುವಂಥದ್ದು. ನಾವೆಲ್ಲಾ ಅದನ್ನೇ ಬದುಕೆಂದು ನಂಬಿ, ಪೂಜಿಸುವವರು. ಅದೊಂದು ಸಮುದಾಯದವರೇ ನಡೆಸಬೇಕೆಂಬ ನಿಯಮ ಇದೆ. ಹಾಗಾಗಿ ಬೇರೆಯವರು ಅದನ್ನು ಕೈಗೆತ್ತಿಕೊಂಡಾಗ ಸ್ವಲ್ಪ ನೋವಾಗುತ್ತದೆ. ಅದು ಸಹಜ ಎಂದೆನಿಸುತ್ತದೆ. ಒಂದು ಸಿನೆಮಾದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರೊಬ್ಬರು ಕೋಲ ಕಟ್ಟುತ್ತಾರೆ. ಅದು ವಾಸ್ತವದಲ್ಲಿ ನಡೆದ ಘಟನೆ. ಹೀಗೆ ಆಯಾಯ ಸಮುದಾಯದವರೇ ಅವರ ಕೆಲಸವನ್ನು ಮಾಡಿದರೆ ಚಂದ ಎನ್ನುವುದು ನನ್ನ ಅನಿಸಿಕೆ. ಏನೇ ಇದ್ರು ಇಲ್ಲಿ ನನಗಾಗಿರುವ ಸಣ್ಣ ಬೇಸರ ನಗಣ್ಯ. ಈ ಸಿನೆಮಾದಿಂದ ನಮಗಾಗಿರುವ ಲಾಭವೇ ಹೆಚ್ಚು.
ಈ ನಡುವೆ ಕುಮಾರಣ್ಣ ಹೇಳಿದ ಕೆಲವು ಪ್ರಮುಖ ವಿಚಾರಗಳು
ನಮ್ಮದು ಪಂಬದ ವರ್ಗ. ಇದಕ್ಕೆ ವಿಶೇಷವಾದ ಹಿನ್ನೆಲೆ, ಇತಿಹಾಸ ಇಲ್ಲ.ನಂತರ ಹುಟ್ಟಿಕೊಂಡಿದ್ದು ಪರವ ಜನಾಂಗ. ನಲಿಕೆ ಸಮುದಾಯಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ. ನಲಿಕೆ ಮತ್ತು ಕೊರಗರು ತುಳುನಾಡಿನ ನಿಜವಾದ ಮೂಲನಿವಾಸಿಗಳು. ಕೊರಗರಿಗಿದ್ದ ತಾಕತ್ತು ಬೇರೆ ಯಾರಿಗೂ ಇರಲಿಲ್ಲ. ಈಗಲೂ ಅವರಿಗೆ ದೈವದ ಸಂಪೂರ್ಣ ಪಾಡ್ದನ ಗೊತ್ತಿದೆ. ಅವರು ಮಾತನಾಡುವುದು ಸ್ಪಷ್ಟವಾದ ತುಳು ಭಾಷೆ. ಆದರೆ ಅವರನ್ನು ನಾವು ಹೊರಗಿಟ್ಟೆವು.ಕೊರಗರ ಡೋಲಿನ ಸದ್ದು ಎಷ್ಟೊಂದು ಇಂಪು. ಅದು ಮೈಲಿಗಟ್ಟಲೆ ಸ್ಪಷ್ಟವಾಗಿ ಕೇಳಿಸುತ್ತದೆ.
# ಶೆಟ್ಟರನ್ನು ಹಿಂದೆಲ್ಲಾ ‘ಒಕ್ಕೆಲಕುಲು’ ಎಂದು ಕರೆಯುತ್ತಿದ್ದರು. ಜೈನರ ಆಡಳಿತವನ್ನು ನೋಡಿಕೊಂಡಿದ್ದವರು ಒಕ್ಕೆಲಕುಲಾಗಿ ನಂತರ ಅದು ‘ಒಕ್ಕೆಲ್ಮೆ’ ಎಂದಾಯ್ತು. ಶೆಟ್ಟಿ ಅಥವಾ ಶೆಟ್ಟರು ಎಂದರೆ ಅಧಿಕಾರಿ ಎಂದರ್ಥ.
# ನಮ್ಮ ಪಂಬದ ಸಮುದಾಯವನ್ನು ಹುಟ್ಟುಹಾಕಿದ್ದು ಶೆಟ್ಟರು. ಹೇಗೆ ಗೊತ್ತಾ ?
ಆ ದಿನಗಳಲ್ಲಿ ಜಾತಿ ಪದ್ಧತಿ ಇತ್ತು. ಕೀಳು ಜಾತಿಯವರು ಹೊಸ್ತಿಲು ದಾಟಿ ಬರಲು ನಿಷೇಧವಿತ್ತು. ಶೆಟ್ಟರ ದೈವಗಳಿರುವುದು ಚಾವಡಿಯಲ್ಲಿ. ಇತರರಿಗೆ ಅಲ್ಲಿ ಪ್ರವೇಶ ಇರಲಿಲ್ಲ. ಇದೇ ಕಾರಣಕ್ಕೆ ಅವರ ದೈವಗಳಿಗೆ ಕೋಲ ಕಟ್ಟಲು ಒಂದು ವರ್ಗದವರು ಬೇಕೆಂದಾಗ ಪಂಬದ ಜನಾಂಗ ಹುಟ್ಟಿಕೊಂಡಿತು.
ನಿಮ್ಮ ಫೋಟೋ / ವಿಡಿಯೋ ಜೊತೆ ಕಾಂತಾರ ಚಿತ್ರದ ದೃಶ್ಯಗಳನ್ನು ಜೋಡಿಸುತ್ತಿದ್ದಾರೆ.
ಹೀಗೆಲ್ಲ ಮಾಡಬಾರದು. ನನ್ನ ಚಿತ್ರ ಅಂತಲ್ಲ. ಯಾರದ್ದೂ ಬಳಸಬೇಡಿ ಎಂದು ವಿನಂತಿಸುತ್ತೇನೆ.
ಕೋಲ ದೃಶ್ಯ ಚಿತ್ರೀಕರಣದ ಸಂದರ್ಭ ರಿಷಬ್ ಶೆಟ್ಟರಿಗೆ ದೈವ ಆವಾಹನೆ ಆಗಿತ್ತು ಎಂಬ ಮಾತು ಪ್ರಚಲಿತದಲ್ಲಿದೆ. ಶೆಟ್ಟರು ‘ ಅದರ ಬಗ್ಗೆ ನಾನು ಹೆಚ್ಚು ಹೇಳಲ್ಲ, Experience ಮಾಡಿದ್ದೇನೆ’ ಎಂದಿದ್ದಾರೆ. ಈ ಬಗ್ಗೆ ನಿಮಗೇನನಿಸುತ್ತದೆ ?
ಹಾ.. ಇದು ಒಳ್ಳೆ ಪ್ರಶ್ನೆ. ಚಿತ್ರೀಕರಣದ ವೇಳೆ ಅವರು ಚಪ್ಪಲಿ ಧರಿಸುತ್ತಿರಲಿಲ್ಲ, ಮಾಂಸಾಹಾರ ತ್ಯಜಿಸಿದ್ದರು ಎಂದು ನಾನು ಕೇಳಿದ್ದೇನೆ. ಅದನ್ನು ನಾನು ಕಂಡಿಲ್ಲ. ಆದರೆ ಕೋಲದ ಅಭಿನಯದ ಅವರ ಮುಖಚರ್ಯೆ ಗಮನಿಸಿದಾಗ ಪಂಜುರ್ಲಿ, ಗುಳಿಗ ಅವರ ಮೇಲೆ ಆವಾಹನೆ ಆಗಿದ್ದು ನೂರಕ್ಕೆ ನೂರು ಸತ್ಯ!!

# ಮುಖಕ್ಕೆ ಬಣ್ಣ ಮೆತ್ತಿದಾಗ ಬೆವತರೂ, ಮುಖದಲ್ಲಿರುವ ಚುಕ್ಕಿ ಅಷ್ಟೇ ಸ್ಪಷ್ಟ ಮತ್ತು ಸೂಕ್ಷ್ಮವಾಗಿ ಕಂಡರೆ ಆತ ಕಟ್ಟುಪಾಡುಗಳನ್ನು ಪಾಲಿಸಿದ್ದಾನೆ ಎಂದರ್ಥ! ಬಣ್ಣ ಮೆತ್ತಿದಾಗ ಭಯ ಎದ್ದು ಕಾಣುತ್ತದೆ. ಭಯ ಇದ್ರೆ ಭಕ್ತಿ ಬರುತ್ತದೆ. ಇವೆರಡೂ ಅವರಲ್ಲಿತ್ತು. ದೈವವನ್ನು ಅವರು ಸಂಪೂರ್ಣ ಅನುಭವಿಸಿದ್ದಾರೆ. ಇಲ್ಲವಾದಲ್ಲಿ ಈ ರೀತಿ ಅಭಿನಯ ಸಾಧ್ಯವೇ ಇಲ್ಲ!
ಗುಳಿಗನ ದೃಶ್ಯ ಮಾತ್ರ ರೋಮಾಂಚಕವಾಗಿತ್ತು. ಮಣ್ಣು ಕೈಲೆತ್ತಿಕೊಂಡು ಒಂದೆರಡು ಕಡೆಗಳಲ್ಲಂತೂ ಅವರ ಹಾವ ಭಾವ, ಅಭಿನಯ ಅದ್ಭುತವಾಗಿತ್ತು. ‘ಮುಕ್ಕಾಲ್ ಮೂಜಿ ಗಳಿಗೆ’ ಯಲ್ಲಿ ದೈವ ಆವಾಹನೆ ಆಗಿದ್ದು ಖಂಡಿತ. ‘ಅವರು ನಿಮಗೆ ಸ್ನೇಹಿತರಲ್ವಾ, ಬೇಕಿದ್ರೆ ಖಾಸಗಿಯಾಗಿ ಕೇಳಿ ನೋಡಿ ಅವಿನಾಶ್ ರೇ’ ಎಂದರು.
# ಕೊನೆಯ ದೃಶ್ಯದಲ್ಲಿ ಫಾರೆಸ್ಟ್ ಅಧಿಕಾರಿಯವರನ್ನು ಕೈ ಸನ್ನೆಯಲ್ಲಿ ಹತ್ತಿರಕ್ಕೆ ಕರೆಯುವ ದೃಶ್ಯ ಮನಮುಟ್ಟುವಂತಿತ್ತು. ದೈವದ ಆ ಸನ್ನೆಯನ್ನು 100 ಬಾರಿ ಅಭ್ಯಾಸ ಮಾಡಿದರೂ ಅಷ್ಟೊಂದು ನಾಜೂಕಾಗಿ ಅಭಿನಯಿಸಲು ಸಾಧ್ಯವೇ ಇಲ್ಲ. ದೈವದ ಅನುಗ್ರಹದಿಂದ ಇದೆಲ್ಲ ನಡೆದಿದೆಯೇ ಹೊರತು ಬೇರೇನೂ ಅಲ್ಲ. ಈ ಚಿತ್ರಕ್ಕೆ ತಿಳಿದವರಿಂದ ಬೇಕಾದ ಸಲಹೆ, ಸೂಚನೆ ಪಡೆದು ಪಾಲಿಸಿರುವುದು ಶ್ಲಾಘನೀಯ.

ದೈವ ಎಲ್ಲಿ ಬರುತ್ತದೆ ?
ನಾವು ಅಂತಹ ನಿಷ್ಕಲ್ಮಶ, ಶರಣಾಗತಿಯ ವಾತಾವರಣ ಸೃಷ್ಟಿಸಿದರೆ ಮಾತ್ರ ದೈವ ಅಲ್ಲಿ ಕಾಣಿಸಿಕೊಳ್ಳುತ್ತದೆ. Set ಸುತ್ತ ಎಲ್ಲರೂ ಪ್ರೀತಿ, ಭಕ್ತಿಯಿಂದಿದ್ದರು ಎಂದು ಕೇಳಿದ್ದೇನೆ. ದೈವ ಅಲ್ಲಿ ಬರಲು ಕೇವಲ ಸಂಕಲ್ಪ ಸಾಕು. ಅವರೆಲ್ಲರ ನಿಷ್ಠೆ, ಪ್ರಾಮಾಣಿಕ ಪ್ರಯತ್ನಕ್ಕೆ ದೈವ ಒಲಿದು ಇಷ್ಟೆಲ್ಲಾ ಬೆಳವಣಿಗೆ ಆಗಿದೆ. ಒಂದು ವೇಳೆ ದೈವ ಅಲ್ಲಿ ಬಾರದೇ ಇದ್ದಿದ್ರೆ ಈ ಸಿನಿಮಾ ಗೆಲ್ಲುತ್ತಿರಲಿಲ್ಲ! ಈ ಹಿಂದೆ ತಯಾರಿಸಿದ ದೈವದ ಕುರಿತ ಸಿನಿಮಾ ಗೆಲ್ಲದೇ ಇದ್ದದ್ದು ನಿಮಗೆ ತಿಳಿದಿರಬಹುದು. ಅವರ ಈ ಗೆಲುವಿಗೆ ದೈವಕ್ಕೆ ಋಣಿಯಾಗಿದ್ದರೆ ರಿಷಬ್ ಇನ್ನಷ್ಟು ಎತ್ತರಕ್ಕೇರುವುದರಲ್ಲಿ ಅನುಮಾನವೇ ಇಲ್ಲ.
ಕಾಂತಾರದ ವಿಷಯ ಇಲ್ಲಿಗೆ ಮುಗಿಯಿತು. ಆದರೆ ಮುಂದಿನ ಲೇಖನದಲ್ಲಿ ದೈವಾರಾಧನೆ ಕುರಿತು ಕುಮಾರಣ್ಣ ಹೇಳಿದ ಕೆಲವು ಅತ್ಯಂತ ಅಪರೂಪದ ವಿಷಯಗಳನ್ನು ನಿಮ್ಮೆದುರುದು ತೆರೆದಿಡುತ್ತೇನೆ. ತಪ್ಪದೆ ಓದಿ..
ದೈವಾರಾಧನೆ ಅಂದ್ರೆ ಆವೇಶ ಕಲೆ ಅಂದ್ರೆ ಪ್ರವೇಶ – ಕುಮಾರ ಪಂಬದ
Disclaimer: The views and opinions expressed in this article are those of the interviewee and do not necessarily reflect the views or positions of this website (avinashkamath.in)
ವಾಹ್, ಎಂತಹ ಅದ್ಬುತ ಲೇಖನ… ಕಾಂತಾರದಷ್ಟೇ ಸೊಗಸಾಗಿದೆ… ನಿಮಗೂ ಹಾಗೂ ಕುಮಾರಣ್ಣನಿಗೂ ಧನ್ಯವಾದಗಳು
Very good experience explained too good 👍👍 good work always give good results thanks very much
“ಕಾಂತಾರ ” ಎಂಬ ಪದವೇ ಅತ್ಯದ್ಬುತ. ನಾನೂ ಕೂಡಾ ಈ ಸಿನೆಮಾ ನೋಡಿದೆ. ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಈ ಸಿನೆಮಾ ಮಾಡಿದ್ದಾರೆ ಎಂದು ಹೇಳಬಹುದು. ಹಿಂದಿನ ಕಾಲದಲ್ಲಿ ಸಿನೆಮಾ ನೋಡಿದರೆ ಅದರಿಂದ ಏನಾದರೂ ಸಮಾಜಕ್ಕೆ ಒಳ್ಳೆಯ ಸಂದೇಶ ಇರುತಿತ್ತು. ಆದರೆ ಇತ್ತೀಚಿನ ಸಿನೆಮಾ ನೋಡಿದರೆ ನಮ್ಮ ಯುವ ಪೀಳಿಗೆ ಅತ್ಯಂತ ಕೆಟ್ಟ ಅಭ್ಯಾಸ ಮೈ ಗೂದಡಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥಹ ಸಂದರ್ಭದಲ್ಲಿ “ಕಾಂತಾರ”ದಂತಹ ಭಕ್ತಿ ಪೂರಕವಾದ ಸಿನೆಮಾ ಬರಬೇಕಿತ್ತು. ಏಕೆಂದರೆ ಇಡೀ ಪ್ರಪಂಚ ನಡೆಯುತ್ತಿರುವುದು ಒಂದು ದೈವೀ ಶಕ್ತಿಯಿಂದ. ಒಂದು ವಿಷಾದ ಏನೆಂದರೆ ಈಗಿನ ಜನರು ಹಣ ಸಂಪಾದನೆಗೆ ಹೆಚ್ಚು ಒತ್ತು ಕೊಡುವ ಮೂಲಕ ಈ ದೈವೀ ಶಕ್ತಿಯನ್ನು ಕಡೆಗಣಿಸುತ್ತಿದ್ದಾರೆ.
2026 ಗೆ “ಸತ್ಯಯುಗ” ಪ್ರಾರಂಭ ಆಗುತ್ತಿದೆ. ಹಾಗಾಗೀ ಇನ್ನೆಲ್ಲಾ ಶುಭಕಾರ್ಯಗಳಿಗೆ ಈ ಪ್ರಕೃತಿ ಎಂಬ ಶಕ್ತಿ ದೈವೀ ಸ್ವರೂಪದ ಮೂಲಕ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನಡೆದಿದ್ದು ಈ “ಕಾಂತಾರ” ಸಿನೆಮಾದ ಮೂಲಕ.
ಇನ್ನಾದರೂ ಜನರಿಗೆ ಜನರು ಮೋಸ ಮಾಡೋವಾಗ ಸ್ವಲ್ಪವಾದರೂ ಭಯ ಭಕ್ತಿ ಇರಲಿ. ಇಂದಿಗೂ ಈ ಪ್ರಪಂಚ ನಡೆಯುತ್ತಿರುವುದು ಸ್ವಲ್ಪ ಮಟ್ಟಿಗೆ ಆದರೂ ದೈವ ದೇವರುಗಳನ್ನು ಆರಾಧಿಸಿ ನಂಬಿ ಜೀವಿಸುತ್ತಿರುವ ಕಾರಣ ಎಂದು ಹೇಳಬಹುದು. ದೊಡ್ಡ ಮಟ್ಟದ ಬದಲಾವಣೆ ಆಗಬೇಕಾದರೆ ಕಲಾವಿದರು ತಮ್ಮ ಕಲಾತ್ಮಕ ಚಿತ್ರಗಳ ಮೂಲಕ ಇಂಥಹ ಸ್ಪೂರ್ತಿದಾಯಕ ಸಿನೆಮಾವನ್ನು ಮಾಡಿದರೆ ಖಂಡಿತವಾಗಿಯೂ 2026ನೇ ಇಸವಿಯ ಹೊತ್ತಿಗೆ ಸತ್ಯಾಯುಗದ ಪ್ರಾರಂಭ ಖಂಡಿತಾ ಸಾಧ್ಯ. “ಕಾಂತಾರ” ಒಂದು ಉದಾಹರೆಯಷ್ಟೆ. ನಮ್ಮ ಕಲಾವಿದರು ಮನಸ್ಸು ಮಾಡಿದರೆ ಇನ್ನಷ್ಟು ಸಮಾಜಮುಖಿ ಒಳ್ಳೆಯ ಸಂದೇಶ ಸಾರುವ ನಿಟ್ಟಿನಲ್ಲಿ ಒಳ್ಳೆಯ ಸಿನೆಮಾ ಮಾಡಬಹುದು.
ಒಟ್ಟಿನಲ್ಲಿ ಹೇಳುವುದಾದರೆ “ಮನಸ್ಸಿದ್ದರೆ ಮಾರ್ಗ”
ಬದಲಾವಣೆ ಜಗದ ನಿಯಮ.
ಆರಾಧನೆ, ಪರಂಪರೆಯ ಕುರಿತಾದ ದೈವಿಕ ಜ್ಞಾನದ ಬಗ್ಗೆ ಬಲು ಅಪರೂಪದ ವಿಚಾರಗಳನ್ನು ತಿಳಿಸಿದ್ದೀರಿ, ಈ ಲೇಖನದ ಓದು ಮೈ ಮನಗಳು ರೋಮಾಂಚನಗೊಳಿಸಬಲ್ಲವು,
ಯಶಸ್ವೀ ಚಿತ್ರದ ಒಳಾಂಗಣದ ಪರಿಚಯ ಮಾಡುವಲ್ಲಿ ಅವಿನಾಶ್ ಯಶಸ್ವಿಯಾಗಿದ್ದಾರೆ.ಯಾವುದೇ ವಿಚಾರವಿರಲಿ ನೋಡುಗರಿಗೆ,ಕೇಳುಗರಿಗೆ ಮೇಲ್ಮುಖದ ಪರಿಚಯ ಮಾತ್ರ ಇರುತ್ತೆ,ಅದರೊಳಗಿನ ವಿಸ್ಮಯಕಾರಿ,ಕುತೂಹಲಕಾರಿ ವಿಷಯಗಳನ್ನು ಬಿಚ್ಚಿಡಲು ಅರ್ಹತೆ ಬೇಕು,ನಮ್ಮ ಅವಿನಾಶ್ ಒಬ್ಬ ಸಮರ್ಥ ಸಂದರ್ಶಕ ಮತ್ತು ವಿಮರ್ಶಕ ಕೂಡ.ತುಂಬ ಸುಂದರವಾಗಿ ಸೂಕ್ಷ್ಮ ವಿಚಾರಗಳ ಮಂಡನೆ “ಕಾಂತಾರದ” ಬಗ್ಗೆ ಮಾಡಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.ಕುಮಾರ ಪಂಬದ ಅವರ ಮಾತದಾಳದ ಮಾತು ಕೂಡ ಒಪ್ಪುವಂತಹುದೆ.ವಿಶೇಷವಾದ ಈ ಮಾಹಿತಿಗೆ ಮತ್ತೊಮ್ಮೆ ಅವಿನಾಶ್ ಗೆ ಧನ್ಯವಾದಗಳು.👍👏👏
ಉಡುಪಿ ಜಿಲ್ಲೆಯ ಉತ್ರರದಿಕ್ಕಿನಲ್ಲಿ,ಅಂದರೆ ಅಂದಾಜು ಮಾಬುಕಳ ಕಳೆದ ಬಳಿಕ ಕೋಲದ ಆಚರಣೆ ಬಹಳ ಕಡಿಮೆ.ಅಲ್ಲಿ ದೈವದರ್ಶನ, ಮಂಡಲ ಎನ್ನುವ ದೈವಾರಾಧನೆಯ ಪದ್ದತಿ ಇದೆ.( ಉಡುಪಿ ಜಿಲ್ಲೆಯ ಉತ್ತರ ಭಾಗ)
ಮರವಂತೆಯಲ್ಲಿ ಯಕ್ಛಿಮನೆ ಎಂಬ ದೈವಾರಾಧನೆಯ ಗುಡಿಯೊಂದಿದೆ. ಅಲ್ಲಿ ಪ್ರತಿ ವರುಷ ಯಕ್ಷಿ ಮಂಡಲ ನಡೆಯುತ್ತದೆ
ನಾನು ಅದೇ ಊರಿನವನು.ನನ್ನ ಬಾಲ್ಯದ ದಿನಗಳಲ್ಲಿ ಈ ಮಂಡಲಗಳನ್ನು,ಈ ದೈವಾರಾಧನೆಗಳನ್ನುಹತ್ತಿರದಲ್ಲಿ ವಿನೀತನಾಗಿ ನೋಡಿದವನು.
ಅಲ್ಲಿ ನಡೆದ ಒಂದು ವಿಶೇಷ ಘಟನೆ ನನಗೆ ನೆನಪಿನಲ್ಲುಂಟು.
ಅಲ್ಲಿನ ಯಕ್ಷಿ ಪಾತ್ರಿ(ದೈವದ ಕಣಿ ಕಟ್ಟುವವರು) ಬಹಳ ವಯಸ್ಸಾದವರು,ಅಂದಾಜು 65-70 ವರುಷ ಪಾಯ ವಾಗಿರಬಹುದು.ಅವರಿಗೆ ಸರಿಯಾಗಿ ನಡೆಯಲಾಗದಷ್ಟುವೃದ್ದಾಪ್ಯ.
ಅವರನ್ನು ದೇವತೆಯ ಗರ್ಭ ಗೃಹಕ್ಕೆ ಕೈಹಿಡಿದು ಕರೆದು ಕೊಂಡೊಯ್ದರು.
ಸ್ವಲ್ಪ ಹೊತ್ತಿನ ಬಳಿಕ,
ಗರ್ಭಗುಡಿಯೊಳಗೆ ನಡೆದುಕೊಂಡು ಹೊಗಲು ಕಷ್ಟ ಪಡುತಿದ್ದ ಪಾತ್ರಿಯವತು ಒಂದೇ ಸವನೆ ಜಿಗಿದುಕೊಂಡು ಹೊರ ಬಂದರು..
ನನಗಂತೂ ಬಹಳ ವಿಸ್ಮಯ.
ಅವರಿಗೆ ಆಕರ್ಷಣೆಯಾಗಿದೆ,ಯಕ್ಚಿಯಮ್ಮ ಅವರ ಮೇಲೆ ಬಂದಿದೆ.ಎಂದು ನನ್ನ ಬಳಿಯಿದ್ದ ನಮ್ಮ ಅಪ್ಪ ಹೇಳಿದರು.
ಸುಮಾರು ಅರ್ಧ ಗಂಟೆಯ ಕಾಲ ಅದೇ ಸ್ತಿಥಿಯಲ್ಲಿದ್ದ ಪಾತ್ರಿಯವರು ಬಳಿಕ ಮೊದಲ ಸ್ಥಿಥಿಗೆ ಬಂದರು.
ಅಂದಿನ ರೋಮಾಂಚನದ ಗಳಿಗೆ ಐವತು ವರುಷಗಳ ಬಳಿಕ ಇಂದಿಗೂ ನೆನಪಿದೆ
—-ಮರವಂತೆ ನಾಗರಾಜ ಹೆಬ್ಬಾರ್, ಉಡುಪಿ