ಬದುಕಿನ ಕುರಿತು ಮತ್ತಷ್ಟು ಗಾಢವಾಗಿ ಆಲೋಚಿಸುವಂತೆ ಮಾಡಿದವರು ಗುರುರಾಜ ಸನಿಲ್. ಶಾಲಾ ದಿನಗಳಿಂದ ಆರಂಭವಾದ ನನ್ನ ಮತ್ತವರ ಸಂಬಂಧ ಹತ್ತು ಹಲವು ಕಾರ್ಯಕ್ರಮಗಳು, ಚಟುವಟಿಕೆಗಳು, ಪರಿಸರ, ಕಾಡು, ಮೇಡು ಸುತ್ತಾಟ ಅಂತೆಲ್ಲ ವ್ಯಾಪಿಸಿ ಹಿಂದೆ ಅಂಕಲ್ ಇದ್ದವ್ರು ಈಗ ಅಣ್ಣನಾಗಿ ಬಿಟ್ಟರು.
ನಮಗೆ ವಿಹಾರಕ್ಕೆ ಹೋಗಲು ಕಾರಣ ಬೇಕಿಲ್ಲ. ಮನಸಾದರೆ ಸಾಕು, ಹೊರಟೇ ಬಿಡುತ್ತೇವೆ. ಉರಗ ಸಂರಕ್ಷಣೆ ಸಂದರ್ಭ ನೂರಾರು ಮನೆಗಳಿಗೆ ಅವರೊಂದಿಗೆ ಭೇಟಿ ಕೊಟ್ಟಿದ್ದೇನೆ. ಶಂಕರನಾರಾಯಣ ಕಾಡು, ಅಲ್ಲಿನ ಹರಿಯುವ ನೀರು, ಬ್ರಹ್ಮಾವರ, ಪೇತ್ರಿ, ಕೊಕ್ಕರ್ಣೆ, ಶಿರಿಯಾರ, ಹೆಬ್ರಿ, ಅಂಪಾರು ಅಲ್ಲಿನ ಒಳಗೊಳಗಿನ ಊರುಗಳು ನಮ್ಮ ಪಾಲಿನ ಸ್ವರ್ಗ.
ವರ್ಷವೂ ಮಳೆ ಜೋರಾಗಿ ಸುರಿದರೆ ಒಂದಿಡೀ ದಿನ ವಿಳಾಸವಿಲ್ಲದೆ ಗೊತ್ತು ಗುರಿಯಿಲ್ಲದ ದಾರಿಯಲ್ಲಿ ಸುಮ್ಮನೆ ಸುತ್ತಾಡುವುದು, ಪರಿಸರದ ಅಂದ, ಚಂದ, ತಂಪು, ಕಂಪು ಆಸ್ವಾದಿಸುವುದು ನಮ್ಮ ಬದುಕು. ಇದೆಲ್ಲಾ ಇತ್ತೀಚಿನ 10 ವರ್ಷಗಳಿಂದ ನಡೆದುಕೊಂಡು ಬಂದಿದೆ.
ದುರದೃಷ್ಟ ಈ ವರ್ಷ ಜುಲೈ ತಿಂಗಳಲ್ಲಿ ಮಾತ್ರ ಮಳೆ ಸುರಿಯಿತು. ಎಡೆಬಿಡದೆ ಮಳೆ ಸುರಿದ ದಿನದ ನಮ್ಮ ಸುತ್ತಾಟದ ವಿಡಿಯೋ ತುಣುಕುಗಳು ನಮ್ಮ ಹುಚ್ಚಾಟಗಳು ಇಲ್ಲಿವೆ.
ಮಳೆಯ ಬಗ್ಗೆ ಹೇಳುತ್ತಾ ಹೋದರೆ ಸಾವಿರ ಮಾತುಗಳಿವೆ. ಮಾತನ್ನು ಮೀರಿದ ಮಳೆಯ ಅಂದವನ್ನು ಸವಿದೇ ನೋಡಬೇಕು.