ಹೊಸ ಮನೆ, ಕಾರು ಖರೀದಿ, ಉದ್ಯೋಗ ಲಭಿಸುವುದು, ಐಡಿಯಾ ಹೊಳೆಯುವುದು ಹೀಗೆ ಎಲ್ಲಾ ಹೊಸತರ ಹುಟ್ಟಿನ ಹಿಂದೆ ಒಂದು ಸ್ವಾರಸ್ಯಕರ ಘಟನೆಯಿರುತ್ತದೆ. ಅದನ್ನು ಆಸಕ್ತಿಯಿಂದ ಗ್ರಹಿಸಿದಾಗ ಹೊಸ ಅನುಭೂತಿ ನಮ್ಮದಾಗುತ್ತದೆ. ಇದು ನಮ್ಮ ಪ್ರತಿನಿತ್ಯದ ಬದುಕಲ್ಲಿ ನಡೆಯುತ್ತಲೇ ಇರುತ್ತದೆ. ಅರಿಯುವ ಪ್ರಯತ್ನ ಮಾಡಿದಾಗ ನಮ್ಮ ಪ್ರಯಾಣ ಇನ್ನಷ್ಟು ಕುತೂಹಲದಿಂದ ಕೂಡಿರುತ್ತದೆ .ಈ ಲೇಖನದಲ್ಲಿ ಇತ್ತೀಚೆಗೆ ಪ್ರತಿಯೊಬ್ಬರೂ ಗುನುಗಿದ, ಗುನುಗುತ್ತಲೇ ಇರುವ ಸಿನಿಮಾ ಗೀತೆಯೊಂದು ಹುಟ್ಟಿ ಸಂಚಲನ ಮೂಡಿಸಿದ ಕತೆಯ ಕುರಿತು ಹೇಳುತ್ತೇನೆ.. ಕೇಳಿ…
ಬಾಲ್ಯದಿಂದಲೂ ನನಗೆ ಸಿನಿಮಾ ಹಾಡುಗಳ ಕುರಿತು ಅಪಾರ ಆಸಕ್ತಿ. ಒಂದು ಹಾಡನ್ನು ಕೇವಲ ಒಂದು ಸಲ ಕೇಳಿದರೆ ಸಾಕು ಅದರ ಸಾಹಿತ್ಯ ಬಾಯಿಪಾಠ ಮಾತ್ರ ಅಲ್ಲ ಸಂಗೀತ ಸಂಯೋಜನೆಯೂ ಅಷ್ಟೇ ನಾಜೂಕಾಗಿ ನೆನಪಿನಲ್ಲುಳಿದುಬಿಡುತ್ತದೆ.9, 10 ನೇ ತರಗತಿಯಲ್ಲಿದ್ದಾಗ ಆಗಿನ ‘ಈ ಟಿವಿ’ಯಲ್ಲಿ ಪ್ರಸಾರವಾಗುತ್ತಿದ್ದ SP Balasubramaniam ಅವರೇ ನಿರೂಪಿಸಿ, ಹಾಡಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಸರಣಿಯನ್ನು ಪ್ರತೀ ವಾರ ತಪ್ಪದೆ ವೀಕ್ಷಿಸುತ್ತಿದ್ದೆ. ವೀಕ್ಷಕರಿಂದ ಅವರಿಗೆ ತಲುಪುವ ಸಾವಿರಾರು ಪತ್ರಗಳಲ್ಲಿ ಕೆಲವನ್ನು ಆಯ್ದು ಅವರ ಹೆಸರು ಉಲ್ಲೇಖಿಸಿ ಅವರ ಅಪೇಕ್ಷೆಯ ಹಾಡನ್ನು ಹಾಡುವುದು ಈ ಕಾರ್ಯಕ್ರಮದ ಪರಿಕಲ್ಪನೆಯಾಗಿತ್ತು. ನಾನೂ ಒಮ್ಮೆ ಪತ್ರ ಬರೆದಿದ್ದೆ. ಆಯ್ಕೆ ಮಾತ್ರ ಆಗಿರಲಿಲ್ಲ!
Anyway .. ವಿಷಯಕ್ಕೆ ಬರ್ತೇನೆ
ಒಂದು ಸಿನಿಮಾ ಹಾಡನ್ನು ರಚಿಸುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಒಳ್ಳೆಯ ಬರಹಗಾರರೆಲ್ಲರೂ ಒಳ್ಳೆಯ ಸಿನಿಮಾ ಸಾಹಿತಿಗಳಾಗಲು ಸಾಧ್ಯವಿಲ್ಲ. ಅದಕ್ಕೆ ಬೇರೆಯದೇ ಆದ ಕೌಶಲ್ಯ ಬೇಕಿದೆ.
ಸಿನಿಮಾ ಗೀತೆ ಹೇಗೆ ರಚನೆಯಾಗುತ್ತದೆ ?
ಮೊದಲು ಸಂಗೀತ ನಿರ್ದೇಶಕರು ಟ್ಯೂನ್ ತಯಾರಿಸುತ್ತಾರೆ. ನಿರ್ದೇಶಕರಿಂದ ಅನುಮತಿ ಸಿಕ್ಕ ಮೇಲೆ ಅದು ಗೀತ ರಚನೆಕಾರರ ಕೈ ಸೇರುತ್ತದೆ. ಸಾಹಿತ್ಯ ಹೇಗಿರಬೇಕೆಂದರೆ ಅದು ಸಿನಿಮಾದ ಸಂದರ್ಭಕ್ಕೆ ಪೂರಕವಾಗಿರಬೇಕು. ಕೇಳುಗರು ಗುನುಗುವಂತಿದ್ದು ಹೊಸ ಪದಗಳ ಜೊತೆಗೆ tune ನ meter ಗೆ ಸರಿಹೊಂದಬೇಕು. ಇಲ್ಲಿ ಕೊನೆಯ ಅಂಶ ಬಹು ಮುಖ್ಯವಾದದ್ದು. ‘ಪಲ್ಲವಿ ಹುಟ್ಟುವುದು ಸವಾಲಿನ ಕೆಲಸ ನಂತ್ರ ಹಾಡು ತನ್ನ ಪಾಡಿಗೆ ರಚನೆಯಾಗುತ್ತದೆ. ಸಿನಿಮಾ ಹಾಡಲ್ವಾ.. ಯಾರು ಬೇಕಿದ್ದರೂ ಬರೆಯಬಹುದು. ಅದೇ ಹತ್ತಿಪ್ಪತ್ತು ಪದಗಳ ಸುತ್ತ ಪ್ರೇಮ ಗೀತೆ. ಕನಸು, ನನಸು, ಮುತ್ತು, ತುತ್ತು, ಆಕಾಶ, ಭೂಮಿ, ತೋಳು ಇತ್ಯಾದಿ ಅಂತೆಲ್ಲಾ ಅಂದುಕೊಂಡಿದ್ದೆ. ಆದ್ರೆ ನಾನು ಹಾಡು ರಚಿಸಲು ಆರಂಭಿಸಿದ ಮೇಲೆ ಇದು ಎಂತಹ ಸವಾಲಿನ ಕೆಲಸ ಎಂದು ಅರಿತೆ’ ಎಂದಿದ್ದರು ಜಯಂತ ಕಾಯ್ಕಿಣಿ ಸರ್.!
ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ Back to Back ಹಿಟ್ ಗೀತೆಗಳನ್ನು ನೀಡುತ್ತಿದ್ದಾರೆ ನಮ್ಮ ಕುಂದಾಪುರ ಭಾಗದ ಯುವ ಸಿನಿ ಸಾಹಿತಿ ಪ್ರಮೋದ್ ಮರವಂತೆ. ಅವರ ಕುರಿತು ಹಿಂದೊಮ್ಮೆ ವಿಸ್ತಾರವಾಗಿ ಬರೆದಿದ್ದೆ.
ಹಳ್ಳಿ ಪ್ರತಿಭೆಯ ಸಿನಿಮಾ ಜರ್ನಿ ಸಿನಿ ಸಾಹಿತ್ಯದ ‘ಸಿಂಗಾರ ಸಿರಿಯೇ’ ಈ Pramod Maravante
ಸಿಂಗಾರ ಸಿರಿಯೇ ಹುಟ್ಟಿದ್ದು ಹೇಗೆ ? ಪ್ರಮೋದ್ ಮಾತಲ್ಲಿ ಕೇಳಿ
ಹೀಗೆ ಹುಟ್ಟಿದ ‘ ಸಿಂಗಾರ ಸಿರಿ’ ಪ್ರಪಂಚದಾದ್ಯಂತ ಭಾಷೆ, ಗಡಿ ಮೀರಿ ಪ್ರಸಿದ್ಧಿ ಪಡೆಯಿತು. ಕಳೆದೊಂದು ವರ್ಷದಲ್ಲಿ Arabic Kuthu , ಶ್ರೀವಲ್ಲಿ, ಜಗವೇ ನೀನು ಗೆಳತಿಯೇ ನಂತರ ಜನರ hellotune, ringtone, Instagram reelsಗಳಲ್ಲಿ ಈ ಹಾಡು ರಾರಾಜಿಸಿ ಬಹಳ ವರ್ಷಗಳಿಂದ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ಬೇರೂರಿ ವೃತ್ತಿಪರ ಸಿನಿ ಸಾಹಿತಿಯಾಗುವ ಪ್ರಮೋದ್ ಕನಸಿಗೆ ‘ಸಿಂಗಾರ ಸಿರಿ’ ಹಾಡು ನೀರೆರೆದು ಪೋಷಿಸಿತು. ಇಂತಹದ್ದೊಂದು ಬ್ರೇಕ್ ಗೆಳೆಯ ಪ್ರಮೋದ್ ಗೆ ಬೇಕಿತ್ತು.

ಮುಗಿಸುವ ಮುನ್ನ
‘ಮುಂಗಾರು ಮಳೆ ‘ ನಂತ್ರ ಕನ್ನಡ ಸಿನಿಮಾ ಮತ್ತು ಚಿತ್ರಗೀತೆಗಳಿಗೆ ಹೊಸ ಆಯಾಮ ನೀಡಿದ ನಮ್ಮ ನೆಚ್ಚಿನ ಇಬ್ಬರು ಸಿನಿ ಸಾಹಿತಿಗಳು ಹೀಗೆನ್ನುತ್ತಾರೆ.
* ಒಂದು ಹಾಡನ್ನು ನೀವು ಆನಂದಿಸಿದ್ದೀರಿ ಅಂದ್ರೆ ಆ ಹಾಡು ನಿಮ್ಮೊಳಗಿತ್ತು ಅಂತ ಅರ್ಥ. ಅಷ್ಟೇ ಅಲ್ಲ ನಮ್ಮೆಲ್ಲರನ್ನು ಒಂದು ಸೂತ್ರದಲ್ಲಿ ಬಂಧಿಸಿದ ಸಂಗತಿಯಿದ್ದರೆ ಅದು ಸಿನಿಮಾ ಗೀತೆಗಳು ಮಾತ್ರ. ಯಾಕಂದ್ರೆ ಲಕ್ಷಾಂತರ ಮಂದಿಗೆ ಒಂದೇ ಹಾಡು, ಭಾವ ನೂರು! – ಜಯಂತ ಕಾಯ್ಕಿಣಿ
* ಒಮ್ಮೆ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಹೆಸರಾಂತ ನಿರ್ದೇಶಕರಾದ ಯೋಗರಾಜ್ ಭಟ್ ಬಂದಿದ್ರು. ನಿರೂಪಕರು – ಹಾಡುಗಳಿಲ್ಲದೆ ಸಿನಿಮಾ ನಿರ್ಮಿಸಲು ಸಾಧ್ಯವಿಲ್ಲವೇ ?ಎಂದು ಕೇಳಿದ ಪ್ರಶ್ನೆಗೆ ಭಟ್ಟರು ‘ ಯಾಕಿಲ್ಲ? ಖಂಡಿತ ಸಾಧ್ಯ ಇದೆ. ಆದ್ರೆ ಸಿನಿಮಾ ಅನ್ನೋದು ಬೂಂದಿ ಲಾಡು. ಗೀತೆಗಳು ಅದರೊಳಗಿನ ದ್ರಾಕ್ಷಿ ಇದ್ದ ಹಾಗೆ. ದ್ರಾಕ್ಷಿ ಇಲ್ಲದೆ ಲಾಡು ತಯಾರಿಸಬಹುದು ಆದ್ರೆ ದ್ರಾಕ್ಷಿ ಇದ್ದರೆ ಲಾಡಿಗೆ ರುಚಿ ಜಾಸ್ತಿ’ ಎಂದಿದ್ದರು.
ಅಂದ ಹಾಗೆ ನಾನು ಸಿನಿಮಾ ಗೀತಗಳ ಕುರಿತಾಗಿ PH.d ಪದವಿ ಪಡೆಯುವ ಉದ್ದೇಶದಿಂದ ಗುರುಗಳಾದ ಪ್ರೊ. ವರದೇಶ್ ಅವರಲ್ಲಿ ಕಳೆದ ವರ್ಷ ಸುದೀರ್ಘವಾಗಿ ಚರ್ಚಿಸಿ Title ಕೂಡ ಅಂತಿಮಗೊಳಿಸಿದ್ದೆವು. ನೋಂದಣಿ ಮಾಡಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ University ಒಂದು ನಿಯಮವನ್ನು ಬದಲಿಸಿದ ಕಾರಣ ಯೋಜನೆ ಅರ್ಧಕ್ಕೆ ನಿಂತಿತು. ಮುಂದೆ ಸಾಕಾರಗೊಳ್ಳುತ್ತಾ? ಕಾಲವೇ ಉತ್ತರಿಸಬೇಕು..
ಈ ವರ್ಷದ Top 5 ಗೀತೆಗಳಲ್ಲಿ ಸಿಂಗಾರ ಸಿರಿಯೆ ಮೊದಲ ಅಥವಾ ದ್ವೀತೀಯ ಸ್ಥಾನ ಪಡೆದು ಮುಂದಿನ ವರ್ಷ ಒಂದಿಷ್ಟು ಪ್ರಶಸ್ತಿಗಳನ್ನು ಬಾಚುವುದಂತೂ ಖಂಡಿತ !ನಮ್ಮ ದೇಶದ ಸಿನಿಮಾ ಗೀತೆಗಳ ಪರಂಪರೆಗೆ ಒಂದು ಉದ್ದಂಡ ನಮಸ್ಕಾರ ಮಾಡಿ ಎಲ್ಲಾ ಸಿನಿ ಸಾಹಿತಿಗಳಿಗೊಂದು ಜೈ ಹೇಳಿ ‘ ಸಿಂಗಾರ ಸಿರಿಯೇ’ ಹಾಡನ್ನು ಇನ್ನೊಮ್ಮೆ ಇಲ್ಲಿ ಕೇಳಿ.. ಹೇಳಲು ಹೋದರೆ ಸಾವಿರ ಮಾತಿದೆ!
Thank you Avinash for bringing this to us.. ಸುಂದರ ಗೀತೆಯ ಹಿಂದೆ ಬಹಳ ಪರಿಶ್ರಮ ಇತ್ತೆಂಬುದು ತಿಳಿಯಿತು. ಶುಭವಾಗಲಿ. ಅಂದ ಹಾಗೆ ಸಿನಿಮಾ ಗೀತೆಗಳ ಕುರಿತಾಗಿ Ph.D. ಮಾಡಬೇಕೆಂಬ ನಿನ್ನ ಕನಸೂ ಸಾಕಾರಗೊಳ್ಳಲಿ.