Home Travel ಹೇಗಿತ್ತು, ಹೇಗಾಯ್ತು ! ಇದು ಸಿರಸಿಯ ಶಂಕರ ಹೊಂಡದ ಕತೆ !

ಹೇಗಿತ್ತು, ಹೇಗಾಯ್ತು ! ಇದು ಸಿರಸಿಯ ಶಂಕರ ಹೊಂಡದ ಕತೆ !

1

ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಘಟ್ಟ ಏರಿ ಸುಮಾರು 60 ಕಿ.ಮೀ ಸಾಗಿ ಬಂದರೆ ಸಿಗುವ ಪ್ರಕೃತಿ ರಮಣೀಯ ಊರು, ಶಿರಸಿ. ನನ್ನೂರು ಉಡುಪಿ ಅಂದಾಗ ಸಹಜವಾಗಿ ಕೃಷ್ಣ ಪರಮಾತ್ಮ ನೆನಪಾದರೆ ಶಿರಸಿ ಎಂದಾಗ ತಕ್ಷಣಕ್ಕೆ ನೆನಪಿಗೆ ಬರುವುದು ಮಾರಿಕಾಂಬೆ. ಉಡುಪಿಗೂ, ಶಿರಸಿಗೂ ಸ್ವಲ್ಪ ಸಾಮ್ಯತೆ ಅಂದ್ರೆ ಎರಡೂ ಕಡೆಗಳಲ್ಲಿ ಎರಡು ವರ್ಷಕ್ಕೊಮ್ಮೆ ಜರಗುವ  ಅದ್ಧೂರಿ ಮಹೋತ್ಸವಗಳು ಇಡೀ ವಿಶ್ವದ ಗಮನ ಸೆಳೆಯುತ್ತದೆ. ಉಡುಪಿಯಲ್ಲಿ ಪರ್ಯಾಯ ಮಹೋತ್ಸವವಾದರೆ ಅಲ್ಲಿ ಮಾರಿಕಾಂಬಾ ದೇವಿಯ ಜಾತ್ರೆ. ಈ ಜಾತ್ರೆಯನ್ನು ದಕ್ಷಿಣ ಭಾರತದ ಅತಿ ದೊಡ್ಡ ಉತ್ಸವವೆಂದೇ ಬಿಂಬಿಸಲಾಗಿದೆ ! ಅಂದ ಹಾಗೆ ಈ ಊರಿನ ಅಳಿಯ ನಾನು. ನನ್ನ ಮಡದಿ ಅಕ್ಷತಾಳನ್ನು ವರಿಸಲು 3 ಕಾರಣಗಳಲ್ಲಿ ಆಕೆ ಶಿರಸಿಯವಳು ಎನ್ನುವುದು ಕೊನೆಯ ಕಾರಣವಾಗಿದೆ!

ಪ್ರತಿ ಬಾರಿ ಇಲ್ಲಿಗೆ ಭೇಟಿ ನೀಡಿದಾಗಲೆಲ್ಲ ಸುತ್ತಮುತ್ತಲಿನ ಕೆಲವು ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡುವುದು ನನಗೆ ರೂಢಿಯಾಗಿದೆ. ಅದರಲ್ಲೊಂದು ಶಂಕರ ಹೊಂಡ. ಅಕ್ಷತಾ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿರುವ ಶಂಕರ ಹೊಂಡ, ಬೆಳಿಗ್ಗೆ- ಸಂಜೆ ಎರಡೆರಡು ಗಂಟೆಗಳಷ್ಟೇ ತನ್ನ ಬಾಗಿಲು ತೆರೆದುಕೊಂಡಿರುತ್ತದೆ. ನಾನಿದನ್ನು ಮೊದಲು ಕಂಡ ಕ್ಷಣದಿಂದಲೂ ಈ ಕೆರೆ ಕುರಿತು ನನಗೆ ಅತೀವ ಕುತೂಹಲ. ಹಾಗಾಗಿ ಈ ಬಾರಿ ವಿಷಯ ಸಂಗ್ರಹಿಸಲೇಬೇಕೆಂದು ಅದರೆದುರಿನಲ್ಲಿರುವ ಶಂಕರ ದೇವಸ್ಥಾನದ ಮ್ಯಾನೇಜರ್ ಸತೀಶ ಹೆಗಡೆ ಅವರನ್ನು ಭೇಟಿಯಾದೆ. ಆತ್ಮೀಯತೆಯಿಂದ ಮಾತನಾಡಿಸಿದ ಅವರು ಶಂಕರ ಹೊಂಡದ ಕುರಿತು ಹೇಳಿದ ಮಾಹಿತಿ ಹೀಗಿತ್ತು.

Shankar Honda, Sirasi

ಶಂಕರ ಹೊಂಡದ ಹಿನ್ನೆಲೆ :

ಈ ಕೆರೆ ಮೊದಲು ಕಂಡು ಬಂದಿದ್ದು ಯಾವಾಗ ಎನ್ನುವುದರ ಕುರಿತು ಇತಿಹಾಸ ಅಥವಾ ಉಲ್ಲೇಖಗಳಿಲ್ಲ. ಆದರಿದು ಅಘನಾಶಿನಿ ನದಿಯ ಉಗಮ ಸ್ಥಾನವಾಗಿದೆ. ಕೆರೆಯ ಮುಂಭಾಗದಲ್ಲಿರುವ ಶಂಕರ ದೇವರಿಗೆ ಅಭಿಷೇಕ ಮಾಡಿದ ನೀರು ಆ ದಿನಗಳಲ್ಲಿ ಈ ಕೆರೆಗೆ ಸೇರುತಿತ್ತು. ಅಲ್ಲಿಂದ ಬೇರೆ ಬೇರೆ ತೊರೆಗಳನ್ನು ಸೇರಿ ನದಿಯಾಗಿ ಹರಿಯಿತು. ಪುರಾತನ ಕಾಲದಲ್ಲಿ ಶಿರಸಿಯ ಗಣೇಶ ವಿಗ್ರಹಗಳನ್ನು ಇದೇ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಶಂಕರ ದೇಸ್ಥಾನದ ಪಕ್ಕದಲ್ಲೇ ಇರುವುದರಿಂದ ಇದಕ್ಕೆ ಶಂಕರ ತೀರ್ಥ ಎಂಬ ಹೆಸರು ಬಂತು.

ಶಂಕರ ಹೊಂಡದ ಅಭಿವೃದ್ಧಿಯ ರೂವಾರಿ ಶ್ರೀನಿವಾಸ ಹೆಬ್ಬಾರ್

ಈ ಕೆರೆಯ ಕುರಿತು ಸರಕಾರ ಅಥವಾ ಸಾರ್ವಜನಿಕರಾಗಲಿ ಗಮನ ಹರಿಸದೆ ಹೂಳು ತುಂಬಿಕೊಂಡು ಹಾಳು ಬಿದ್ದಂತಿತ್ತು. ಇದನ್ನು ಅಭಿವೃದ್ಧಿಪಡಿಸಿ ಊರಿಗೆ ಉಡುಗೊರೆ ಎಂಬಂತೆ ನೀಡಬೇಕೆಂದು ಟೊಂಕ ಕಟ್ಟಿ ನಿಂತವರು ಈ ಊರಿನ ಉದ್ಯಮಿ ಶ್ರೀನಿವಾಸ ಹೆಬ್ಬಾರ್ ಅವರು . ಈ ವ್ಯಕ್ತಿ  ತನ್ನ ಸ್ವಂತ ಆಸಕ್ತಿ ಮತ್ತು ದುಡಿಮೆಯಿಂದ ಶಿರಸಿ ಭಾಗದ ಹಲವು ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಮೊದಲು ಆನೆಕೊಂಡ, ಕಲ್ಕುಣಿ ಕೆರೆ ನಂತ್ರ ಶಂಕರ ಹೊಂಡವನ್ನು ಅಭಿವೃದ್ಧಿಪಡಿಸಿದರು. ಈ ಕೆರೆಯಲ್ಲಿ ಆಳವಾಗಿ ಹೂಳು ತುಂಬಿಕೊಂಡಿತ್ತು. ಹೂಳೆತ್ತಲು ಬಂದ ಹಿಟಾಚಿ ಯಂತ್ರವೇ ಹೂತು ಬಿದ್ದಿತ್ತು. ಬೇರೆ ಯಾರೂ ಸಹಕಾರ ನೀಡದ ಕಾರಣ ಹೆಬ್ಬಾರರು ಖುದ್ದು ಯಂತ್ರವನ್ನು ಖರೀದಿಸಿ ಹೂಳೆತ್ತಿದರಂತೆ. 4 ವರ್ಷಗಳ ಹಿಂದೆ ಇದನ್ನು ನೀವು ಕಂಡಿದ್ದರೆ ಇಲ್ಲೊಂದು ಕೆರೆ ಇರುವುದರ ಕುರಿತು ಯಾರಿಗೂ ಊಹಿಸಲು ಸಾಧ್ಯವಿರಲಿಲ್ಲ ಎನ್ನುತ್ತಾರೆ ಸತೀಶ ಹೆಗಡೆ.

Shankar Honda few years back

ಸುತ್ತಲೂ CC ಕ್ಯಾಮೆರಾ ಅಳವಡಿಸಿದ್ದಾರೆ. ಯಾರಾದರೂ ಅಚಾತುರ್ಯ ಮಾಡಿದಲ್ಲಿ ಅವರನ್ನು ಕ್ಯಾಮೆರಾ ಸಹಾಯದಿಂದ ಹುಡುಕಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿತವಾಗಿರುವ ಈ ಕೆರೆಯಲ್ಲಿರುವ ಮೀನುಗಳಿಗೆ ಪ್ರತಿದಿನ ಆಹಾರ ಒದಗಿಸುತ್ತಾರೆ. ಬೆಳಿಗ್ಗೆ, ಸಂಜೆ ಹೊತ್ತಿಗೆ ವಾಕ್ ಮಾಡಲು ಇದು ಉತ್ತಮ ಸ್ಥಳ. ಹಿರಿಯರಿಗೆ ವ್ಯಾಯಾಮ ಮಾಡಲು ಆಧುನಿಕ ಸಲಕರಣೆಗಳು ಅಳವಡಿಸಿದ್ದಾರೆ. ಕೆರೆಗೆ ಮೆರುಗು ನೀಡುವಂತೆ ಮಧ್ಯೆ ಕಾರಂಜಿ, ಹಾಗೆ ಸುಮ್ಮನೆ ಕೂತು ಕಣ್ತುಂಬಿಕೊಳ್ಳಲು ಬೆಂಚುಗಳಿವೆ. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯೂ ಇದೆ.

ಶಿರಸಿ ಕಡೆ ನೀವು ಬಂದರೆ ಈ ಕೆರೆಯನ್ನು ನೋಡಲು ಮರೆಯಬೇಡಿ. ಒಂದು ಕೆರೆ ಒಂದೂರಿಗೆ ನೀರು ಒದಗಿಸಬಲ್ಲದು.  ಊರಿನ ಆಸ್ತಿ ಎನಿಸಿಕೊಂಡಿರುವ ಕೆರೆಗಳು ಹಾಳುಬಿದ್ದರೆ ಮುಂದೆ ನಾವು ಒಂದು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಒದಗಿ ಬಂದರೂ ಆಶ್ಚರ್ಯ ಇಲ್ಲ.

Seating arrangements

ಶ್ರೀನಿವಾಸ ಹೆಬ್ಬಾರ್ ಮತ್ತವರ ಈ ಅಭಿವೃದ್ಧಿಯ ಕುರಿತು ಊರಿನವರಿಗೆ ಎಷ್ಟರ ಮಟ್ಟಿಗೆ ತಿಳಿದಿದೆಯೋ ಗೊತ್ತಿಲ್ಲ. ಆದರೆ ಇಂತಹ ಅಮೋಘ ಕಾರ್ಯವನ್ನು ಕೈಗೆತ್ತಿಕೊಂಡು ಊರಿಗೊಂದು ಕೊಡುಗೆ ನೀಡಿದ ಹೆಬ್ಬಾರರಿಗೆ ನನ್ನದೊಂದು ನಮಸ್ಕಾರ.

Srinivasa Hebbar, man behind development of historic Shankar Honda

ಶಿರಸಿ ಎಂಬ ಊರಿನ ಕುರಿತು ಹೇಳಲು ಹೋದರೆ ಸಾವಿರ ಸಾವಿರ ಮಾತಿದೆ..


 

1 COMMENT

LEAVE A REPLY

Please enter your comment!
Please enter your name here