2008ರಲ್ಲಿ ಮಣಿಪಾಲದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದ ಸಂದರ್ಭ ನನಗೆ ಪಾಠ ಹೇಳುತ್ತಿದ್ದ ವರದೇಶ್ ಹಿರೇಗಂಗೆ ಅವರು “ನಿನ್ನ ಫ್ರೆಂಡ್ ಬಂದಿದ್ರಪ್ಪ, ಇಷ್ಟು ಹೊತ್ತು ಇಲ್ಲೇ ಇದ್ರು. ಸಂಜೆ ವಾಪಾಸ್ ಬರ್ತಾರಂತೆ. ನಿನಗೆ ಕರೆ ಮಾಡುತ್ತೇನೆ ತಪ್ಪದೆ ಬಾ” ಅಂದಿದ್ರು. ನನ್ನ ಯಾವ ಸ್ನೇಹಿತರೂ ಅವರಿಗೆ ಪರಿಚಯವಿಲ್ಲದ ಕಾರಣ ಹೀಗೆ ಯಾಕೆ ಹೇಳಿದರು ಎನ್ನುವ ಪ್ರಶ್ನೆ ನನ್ನಲ್ಲಿ ಹಾಗೆಯೇ ಕೊರೆದು ಸಂಜೆ ಕರೆ ಬಂದು ಮತ್ತೆ ಅವರ Cabin ಗೆ ಹೋಗಿದ್ದಾಗ ಅಲ್ಲಿ ಕಂಡದ್ದು ವಿಸ್ಮಯ! ಜಯಂತ್ ಸರ್ (Jayant Kaikini) ಜೊತೆಗಿನ ನನ್ನ ಮೊದಲ ಭೇಟಿ ಅದು. ಅಲ್ಲಿಂದ ಇಲ್ಲಿಯವೆರೆಗೆ ಹಿರಿಯರಾಗಿ, ಗುರುವಾಗಿ, ಸ್ನೇಹಿತರಾಗಿ ನನ್ನನ್ನು ಸಲಹಿದ್ದಾರೆ.
ಅವರ ಜನ್ಮದಿನದ ಈ ವಿಶೇಷವಾದ ಸಂದರ್ಭದಲ್ಲಿ ಹೇಳಲು ಹೊರಟರೆ ಸಾವಿರ ಸಾವಿರ ಮಾತಿದೆ. ಆದರೆ ಈ ಹೊತ್ತಿಗೆ ನನ್ನ ಪಾಲಿಗೆ ಅತ್ಯಂತ ಆಪ್ತವೆನಿಸುವ, ಈ ಹೊತ್ತಿಗೆ ನೆನಪಾಗುವ ಒಂದಿಷ್ಟು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಭೇಟಿಯಾದ ವರ್ಷದಲ್ಲೇ ಅವರು ‘An exploration into the success of Kannada Blockbuster movie Mungaru Male Thesis’ ಗೆ ಸಹಕಾರ ನೀಡಿದರು. ಯೋಗರಾಜ್ ಭಟ್, ಕ್ಯಾಮೆರಾ ತಂತ್ರಜ್ಞ ಕೃಷ್ಣ, ಮನೋಮೂರ್ತಿ ಅವರನ್ನು ಭೇಟಿಯಾಗಿ ಸಂದರ್ಶನ ನಡೆಸುವ ಅವಕಾಶವನ್ನು ನನಗೆ ಕಲ್ಪಿಸಿದರು. ನಾನು ಆ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ TV Channel ನಲ್ಲಿ ಸಂದರ್ಶನ ನೀಡಿದರು.
ಹೀಗೆ ಅವರ ಸಿನಿಮಾ ಗೀತೆಗಳು ಕನ್ನಡದ ಪ್ರತಿ ಮನಸುಗಳಿಗೆ ತಲುಪುವ ಹೊತ್ತಲ್ಲಿ ಅವರ ಚಿತ್ರಗೀತೆಗಳ ಸಂಗೀತ ಸಂಜೆಯೊಂದನ್ನು ಆಯೋಜಿಸಿದೆ.
ಕನಸು ಕೈಗೂಡಿದ ಕ್ಷಣಗಳವು.
ಇದೇ ಕಾರ್ಯಕ್ರಮವನ್ನು 2014 ರಲ್ಲಿ ಬಾರಕೂರಿನ 14 ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸುವ ಅವಕಾಶವನ್ನು ಸ್ನೇಹಿತರಾದ ಕಿಶೂ ಬಾರ್ಕೂರ್ ತಮ್ಮ ಗುರುಗಳಾದ ರಾಮ ಭಟ್ ಸಜಂಗದ್ದೆ ಮೂಲಕ ಕಲ್ಪಿಸಿದರು.

ಇದೇ ಕಲ್ಪನೆಯನ್ನು ನಮ್ಮ ರಾಜ್ಯದ ಸಾಂಸ್ಕೃತಿಕ ರಾಯಭಾರಿ ಮೋಹನ್ ಆಳ್ವ ಅವರಲ್ಲಿ ಪ್ರಸ್ತುತಪಡಿಸಿದಾಗ ಖುಷಿಯಿಂದ ಒಪ್ಪಿಗೆ ನೀಡಿದರು. ಸಾವಿರಾರು ಜನರ ಸಮ್ಮುಖದಲ್ಲಿ ಸಂಗೀತ ಸಂಜೆ ಅತ್ಯಂತ ಯಶಸ್ವಿಯಾಗಿ ಮೂಡಿ ಬಂತು.

ಆತ್ಮೀಯರಾದ ಪ್ರೀತಮ್ ಶೆಣೈ ಅವರು ಮೈಸೂರಿನಲ್ಲಿ ಇದೇ ಕಾರ್ಯಕ್ರಮವನ್ನು ರೋಟರಿ ಮೈಸೂರು ಇದರ ಮೂಲಕ ಆಯೋಜಿಸಿದರು.

ಈ ಎಲ್ಲಾ ಕಾರ್ಯಕ್ರಮ ಆಯೋಜನೆಯ ಮೊದಲು 2010 ರಲ್ಲಿ ಸಿನಿಮಾ ಗೀತೆಗಳ ಕುರಿತು ನನಗಿರುವ ಅಪಾರ ಆಸಕ್ತಿಯನ್ನು ಗುರುತಿಸಿದ ಆತ್ಮೀಯರಾದ ಕೋಟದ ನರೇಂದ್ರ ಮೇಷ್ಟ್ರು ಕಾಯ್ಕಿಣಿ ಅವರ ಸಿನಿಮಾಗೀತೆಗಳಿಗೆ ಹೊಸ ಸ್ಪರ್ಶ ನೀಡಿ ಅದನ್ನು ವಿಶೇಷ ರೀತಿಯಲ್ಲಿ ಪ್ರಸ್ತುತಪಡಿಸುವ Idea ಒಂದನ್ನು ನೀಡಿದರು. ಕೃತಿ ನಿರ್ಮಾಣ ನನಗೆ ಹೊಸ ಅನುಭವ ನೀಡಿತು. ಕೋಟಾದಲ್ಲಿ ಜಯಂತ ಸರ್ ಸಮ್ಮುಖದಲ್ಲಿ ಅವರೇ ಈ ಪುಸ್ತಕ ಬಿಡುಗಡೆಗೊಳಿಸಿದ್ದು ಅತ್ಯಂತ ವಿಶೇಷವಾಗಿತ್ತು.

ಈ ನಡುವೆ ಕನ್ನಡದ ಹೆಸರಾಂತ ಟಿವಿ ಕಾರ್ಯಕ್ರಮ Weekend with Rameshನಲ್ಲಿ ಜಯಂತ್ ಸರ್ ಅತಿಥಿಯಾಗಿ ಭಾಗವಹಿಸಿದಾಗ ನನಗೂ ಅಲ್ಲಿ ಮಾತನಾಡುವ ಅವಕಾಶ ಸಿಕ್ಕಿತ್ತು. ಅದೇ ದಿನ ಒಂದೆರಡು ಪ್ರಮುಖ ಕಾರ್ಯಕ್ರಮಗಳನ್ನು ಒಪ್ಪಿಕೊಂಡ ಕಾರಣ ಬೆಂಗಳೂರಿಗೆ ತೆರಳಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಕಳುಹಿಸಿದ ವಿಡಿಯೋ ಇಲ್ಲಿದೆ. ನಾನಿಲ್ಲಿ ಹೇಳಬೇಕಿರುವ ಅದೆಷ್ಟೋ ವಿಷಯಗಳು ಇಲ್ಲಿವೆ. 9 ನಿಮಿಷಗಳ ಉದ್ದದ ವಿಡಿಯೋವಾದರೂ ನಿಮ್ಮ ಸಮಯ ಮಾತ್ರ ಹಾಳಾಗುವುದಿಲ್ಲ. ನೋಡಿ.
2018 ರಲ್ಲಿ ಕತಾರ್ ಕನ್ನಡದ ಕಟ್ಟಾಳು ರವಿ ಶೆಟ್ಟರು ಒಂದು ಮುಂಜಾನೆ ಕರೆ ಮಾಡಿ “ಈ ಬಾರಿ ನಮ್ಮ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಯಂತ ಸರ್ ಬರುತ್ತಾರೆ. ಜೊತೆಗೆ ನೀನು ಬರಬೇಕು, ಪೂರ್ತಿ ನಿರೂಪಣೆ ನಿಂದೇ” ಎಂದಾಗ ತೇಲಾಡಿದ್ದೆ. ಬೆಂಗಳೂರಿನಿಂದ ವಿಮಾನ ಹತ್ತಿ ಕತಾರ್ ನಲ್ಲಿ ಜೊತೆಯಾಗಿ ನಾವು ಕಳೆದ ಪ್ರತಿಯೊಂದು ಕ್ಷಣವೂ ಅವಿಸ್ಮರಣೀಯ.

ನಾನು ಕುಪ್ಪಳಿಯಲ್ಲಿ ‘ಮಂತ್ರ ಮಾಂಗಲ್ಯ’ ರೀತಿ ವಿವಾಹವಾದೆ. ಕುವೆಂಪು ವಿರಚಿತ ಒಂದು ಕೃತಿಯನ್ನು ವಾಚಿಸುವುದು ಸಂಪ್ರದಾಯ. ಅದನ್ನು ಜಯಂತ ಸರ್ ನೆರವೇರಿಸಿದ್ದು ನನ್ನ, ಅಕ್ಷತಾಳ ಭಾಗ್ಯವಲ್ಲದೆ ಮತ್ತೇನೂ ಅಲ್ಲ!


ಮುಗಿಸುವ ಮುನ್ನ
2008 ರಲ್ಲಿ ಅವರ ತಾಯಿ ಶಾಂತಾ ಕಾಯ್ಕಿಣಿ ಅವರ ಆರೋಗ್ಯ ಏರುಪೇರಾಗಿದ್ದ ದಿನಗಳಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿನ ಗಣೇಶನ ಮೂರ್ತಿಯ ಎದುರು ನಿಂತು “ನೋಡು, ಈ ಆಸ್ಪತ್ರೆಯೇ ನಿಜವಾದ ದೇವಸ್ಥಾನ. ಈ ಗಣೇಶನ ಮುಂದೆ ಎಲ್ಲ ಧರ್ಮದವರೂ ಬಂದು ಪ್ರಾರ್ಥಿಸುತ್ತಾರೆ. ಅವರ ಮನೆಯವರು ಆರೋಗ್ಯವಾದರೆ ಸಾಕು ಅದು ಗಣೇಶ, ಜೀಸಸ್, ಅಲ್ಲಾಹು ಯಾರಿಂದಾದರೂ ಪರವಾಗಿಲ್ಲ. ಆಸ್ಪತ್ರೆಯಲ್ಲಿ ಯಾವುದೇ ಬೇಧ – ಭಾವ ಇಲ್ಲ” ಎಂದಿದ್ದರು. ಮಾನವೀಯತೆಯನ್ನು ಸಾರುವ ಅವರ ಮಾತುಗಳು ಮನಸ್ಸಿಗೆ ಹಿತ ಕೊಡುತ್ತವೆ. ಬುದ್ಧಿಗೆ ಬೆಳಕು ಕೊಡುತ್ತವೆ.
ನಾನಿವತ್ತು ಮಾಧ್ಯಮ ಸೇರಿದಂತೆ ಮನೋರಂಜನೆಯ ಹಲವು ಕ್ಷೇತ್ರಗಳಲ್ಲಿ ತೊಡಗಿರಲು ಕಾರಣ ಅವರೇ ಎನ್ನಬೇಕು. 2010 ರಲ್ಲಿ ರೇಡಿಯೋದಲ್ಲಿ ಕಾರ್ಯನಿವಹಿಸುತ್ತಿದ್ದ ಸಂದರ್ಭ ಜನವರಿ 14ರ ಮಕರ ಸಂಕ್ರಾಂತಿಗೆ ಅವರ ಸಂದರ್ಶನ ನಡೆಸಿದ್ದೆ. ಆಗ ಅವರು “ಏಯ್, ನೀನು ಯಾವುದೊ ಒಂದು ಕೆಲಸ ಮಾಡ್ಲಿಕ್ಕೆ ಹುಟ್ಟಿದವನಲ್ಲ. ಬರೆಯಬಹುದು, ಇನ್ನೂ ಏನೇನೋ ಮಾಡಬಹುದು” ಎಂದಿದ್ದರು. ಇದೇ ಮಾತಿನಿಂದ ಪ್ರೇರಣೆ ಪಡೆದು ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡೆ.
“ನಾವು ಮನುಷ್ಯರಾಗಿ ಹುಟ್ಟಿಲ್ಲ ಆದರೆ ಮನುಷ್ಯರಾಗೋದಕ್ಕೆ ಹುಟ್ಟಿದ್ದೇವೆ” ಎನ್ನುವ ಕನ್ನಡದ ಹೆಸರಾಂತ ಸಾಹಿತಿಗಳಲ್ಲಿ ಒಬ್ಬರಾದ ಯಶವಂತ ಚಿತ್ತಾಲರ ಮಾತನ್ನು ಆಗಾಗ ಅವರು ಉಲ್ಲೇಖಿಸುತ್ತಾರೆ.
ಕರುನಾಡು ಅವರ ಜ್ಞಾನ, ಪಾಂಡಿತ್ಯವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳುವಂತಾಗಲಿ ಎಂಬ ಹಾರೈಕೆಯೊಂದಿಗೆ ಸಾಹಿತ್ಯದ ಗಣಿ, ಸ್ಪೂರ್ತಿಯ ಚಿಲುಮೆ, ಲಕ್ಷಾಂತರ ಓದುಗರ ಪ್ರೀತಿಯ ಕತೆಗಾರ, ಮಮತೆ – ಸಮತೆಯ ಹರಿಕಾರ, ಪದಗಳ ಮೋಡಿಗಾರ, ಹೊಸ ಮನ್ವಂತರದ ಮಾಯಗಾರ ಜಯಂತ ಕಾಯ್ಕಿಣಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
Happy Birthday Jayanth Kaikini Sir💐
ನಿಜವಾಗಿಯೂ ಕನ್ನಡದ ಪ್ರತಿಭಾವಂತ,ಸರಳ ಸಜ್ನನ ವ್ಯಕ್ತಿ ಅನೋದಕ್ಕೆ ಎರಡು ಮಾತಿಲ್ಲ!!! ಅಂತಹವರ ಸಮೀಪದ ಅನುಭವ,ಮಗನಿಗೆ ಅವರೆದುರಿಗೆ ಅವಕಾಶ ಕಲ್ಪಿಸಿದ ಅವಿನಾಶ್ ಗೆ ಪ್ರೀತಿಯ ಧನ್ಯವಾದಗಳು 🙏 ಜಯಂತ್ ಸರ್ ನಿಮ್ಮ ಮುಂದಿನ ಜೀವನ ಆರೋಗ್ಯಮಯವಾಗಿರಲಿ🎂💐ನಿಮ್ಮ ಮನಮುಟ್ಟುವ ಹಾಡುಗಳ ಇಂಪು ನಿಮ್ಮ ಜೊತೆಗಿನ ಅನುಭವ ಮಾಡಿಸುತ್ತೆ.
Nice Article Avinash 👍