Blog ಆರಂಭವಾದಾಗಿನಿಂದ ನನಗೆ ಬಾಲ್ಯವೇ ಹೆಚ್ಚು ಕಾಡಲು ಪ್ರಾಯಶಃ ನನ್ನದೇ ಶಾಲೆಯಲ್ಲಿ ಒಂದು ವರ್ಷ ಮುಂದಿದ್ದ ಭುವನೇಶ್ ಕಾರಣ. ಸದ್ಯ ಒಂದೇ ಸಂಸ್ಥೆಯಲ್ಲಿ ನಾವು ಕಾರ್ಯನಿರ್ವಹಿಸುತ್ತಿರುವುದರಿಂದ ಪ್ರತಿದಿನ ಎನ್ನುವಂತೆ ಶಾಲೆಯ ದಿನಗಳು, ಅಲ್ಲಿನ ಆಗುಹೋಗುಗಳನ್ನು ಮಾತನಾಡುತ್ತಲೇ ಇರುತ್ತೇವೆ. ನಮ್ಮ ಮನಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿರುವುದರಿಂದ ಸಮಾನ ಆಸಕ್ತಿಯ ಹಲವು ವಿಷಯಗಳಲ್ಲಿ ದೈವಾರಾಧನೆಯೂ ಒಂದು. ಹಾಗಾಗಿ ಇಂದಿನ ವಿಷಯ ಬಾಲ್ಯ ಮತ್ತು ದೈವಾರಾಧನೆ…
ಶಾಲೆಯ ದಿನಗಳನ್ನು ನಾನು ಕಳೆದದ್ದು ಉಡುಪಿ(Udupi) ಬನ್ನಂಜೆಯ(Bannanje) ಹೀರಾ ಬಾಗ್(Heera Baug) ಎನ್ನುವ ವಠಾರದಲ್ಲಿ. ಅಲ್ಲಿ 48 ಮನೆಗಳು. ಊರಿನ ಹೆಸರಾಂತ ಕಾಲೇಜಿನ ಕೆಲವು ಹೆಸರುವಾಸಿ ಪ್ರಾಧ್ಯಾಪಕರು ಅಲ್ಲೇ ವಾಸವಿದ್ದರು. ಅಲ್ಲಿಂದ ಸುಮಾರು ಅರ್ಧ ಕಿ. ಮೀ ದೂರದಲ್ಲಿ ಕಲ್ಕುಡ ದೈವಸ್ಥಾನ. ಪ್ರತಿ ಸಂಕ್ರಾಂತಿ ತಂದೆ, ತಮ್ಮ, ಅಜ್ಜಿಯ ಜೊತೆ ಅಲ್ಲಿಗೆ ಭೇಟಿ. ಹೂವಿನ ಪೂಜೆ ನೀಡಿ ದರ್ಶನ ಸೇವೆ ನೋಡಿ ಬರುವುದು ಎಷ್ಟೋ ವರ್ಷಗಳ ಕಾಲ ವಾಡಿಕೆಯಾಗಿತ್ತು. ಹೀಗೆ ದೈವಾರಾಧನೆ ಕುರಿತು ಆಸಕ್ತಿ ನನಗೆ ಅಲ್ಲಿಂದ ಬೆಳೆಯಲು ಆರಂಭವಾಯಿತು.

ಈ ದೈವಸ್ಥಾನದ ಎದುರಿರುವ ಮನೆಗೆ ಕಲ್ಕುಡ ಮನೆ ಎಂದು ಹೆಸರು. ಬಂಟ ಸಮುದಾಯಕ್ಕೆ ಸೇರಿದ ಆ ಕುಟುಂಬ ಅತ್ಯಂತ ಭಕ್ತಿಯಿಂದ ಆತನನ್ನು ಪೂಜಿಸುತ್ತಾರೆ. ಅಂತರ್ಜಾಲ, ಸಂಪರ್ಕ ಅಷ್ಟಕ್ಕಷ್ಟೇ ಇದ್ದ ಆ ದಿನಗಳಲ್ಲೂ ಅಲ್ಲಿಗೆ ದೂರದೂರಿನಿಂದ ನೂರಾರು ಭಕ್ತರು ಬರುತ್ತಿದ್ದರು. ತಮ್ಮ ಸಮಸ್ಯೆ, ಅಳಲು ಸಂಕ್ರಾಂತಿಯ ದರ್ಶನದಲ್ಲಿ ತೋಡಿಕೊಂಡು ಪರಿಹಾರ ಕಂಡು ನಿರಾಳರಾಗುತ್ತಿದ್ದರು. ಇದಕ್ಕೆ ನಾವೂ ಹೊರತಾಗಿರಲಿಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ನಾನು ಸಣ್ಣವನಿದ್ದಾಗ ದೈವಾರಾಧನೆ ಅಂದ್ರೆ ಒಂದು ರೀತಿಯ ಭಯ! ದೈವ ಅವಾಹನೆಯಾಗುವ ಹೊತ್ತು, ಅಲ್ಲಿನ ಆಗು ಹೋಗುಗಳು, ಪ್ರಸಿದ್ಧ ನಾದಸ್ವರ ಕಲಾವಿದರಾದ ಬೊಗ್ರ ಶೇರಿಗಾರ್ ಅವರ ವಾದ್ಯ ಇದೆಲ್ಲವೂ ಒಟ್ಟಾದಾಗ ಭಕ್ತಿಗಿಂತ ಭಯವೇ ಹೆಚ್ಚಿತ್ತು. ಅಲ್ಲಿನ ವಾರ್ಷಿಕ ಕೋಲ ಜರಗುವಾಗ ದೈವ ಜೀಟಿಗೆ ಹಿಡಿದು ಆವೇಶಭರಿತವಾಗಿ ಮನೆಯವರೊಂದಿಗೆ ಸಂಭಾಷಣೆ ನಡೆಸುವ ರೀತಿ ನೋಡುವ ಕುತೂಹಲ ಈಗಲೂ ನನ್ನಲ್ಲಿ ತಣಿದಿಲ್ಲ. ಕಾಲ ಸರಿದಂತೆ ಬನ್ನಂಜೆ ಕಲ್ಕುಡ ಹೋಗಿ ‘ ಕಲ್ಕುಡ ಮನೆ’ ಹೆಸರು ಆಪ್ತವಾಗಿ ಜನಮಾನಸದಲ್ಲಿ ಈ ಹೆಸರು ಪ್ರಚಲಿತಕ್ಕೆ ಬಂತು.ಹೀಗೆ ನಾನು ಕನಿಷ್ಠ 10 ವರ್ಷ ಕಲ್ಕುಡ ಮನೆಗೆ ಹೋಗಿದ್ದೇನೆ, ಆತನ ಅನುಗ್ರಹ ಪಡೆದಿದ್ದೇನೆ.

ಬನ್ನಂಜೆ ‘ಕಲ್ಕುಡ ‘ ಪ್ರತಿಷ್ಠಾಪನೆ ಆಗಿದ್ದು ಹೇಗೆ ?
ಸದ್ಯ ಅಲ್ಲಿನ ಪೂಜಾ ಕೈಂಕರ್ಯವನ್ನು ನೋಡಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗಿತ್ತು..
ಅದೆಷ್ಟೋ ವರ್ಷಗಳ ಹಿಂದೆ ಅವರ ಪಿಜ್ಜ ಸೂರಣ್ಣ ಶೆಟ್ಟರು ಒಮ್ಮೆ ಧರ್ಮಸ್ಥಳಕ್ಕೆ ಹೋಗಿದ್ದರಂತೆ. ಅಲ್ಲಿಂದ ಹಿಂದಿರುಗುವಾಗ ಇವರ ಭಕ್ತಿಗೆ ಒಲಿದು ಕಲ್ಕುಡ ಇವರನ್ನು ಹಿಂಬಾಲಿಸಿಕೊಂಡು ಬಂದನಂತೆ. ಆದರೆ ಅದು ಇವರ ಗಮನಕ್ಕೆ ಬಂದಿರಲಿಲ್ಲ. ದಿನಗಳು ಕಳೆದಂತೆ ಅವರ ಮನೆಯ ಅಂಗಳದಲ್ಲಿ ಇಬ್ಬರು ಮಕ್ಕಳು ಆಟವಾಡಿದಂತೆ ಭಾಸವಾಗುತ್ತಿತ್ತು. ಕೆಲವೊಮ್ಮೆ ಆ ಮಕ್ಕಳು ಮನೆಯೊಳಗೆ ಬಂದು ಹಾಲು, ನೀರು ಕೇಳುತ್ತಿದ್ದರು. ತರಲು ಒಳಗೆ ಹೋದಾಗ ಅವರು ಮಾಯವಾಗುತ್ತಿದ್ದರು. ಹಸಿ ತೆಂಗಿನ ಮರಕ್ಕೂ ಒಂದೆರಡು ಬಾರಿ ಇದ್ದಕ್ಕಿದ್ದಂತೆ ಬೆಂಕಿ ಬಿದ್ದಿತ್ತಂತೆ! ಹೀಗಿರುವಾಗ ಮಂತ್ರವಾದಿಯೊಬ್ಬರನ್ನು ಕರೆಸಿದಾಗ ನಿಜ ವಿಚಾರ ತಿಳಿಸಲು ಅವರಿಂದಲೂ ಸಾಧ್ಯವಾಗಲಿಲ್ಲ. ಬೇರೆ ಕ್ಷೇತ್ರಗಳಲ್ಲಿ ಪ್ರಶ್ನೆ ಮುಖಾಂತರ ಕೇಳಿದಾಗ ಕಲ್ಕುಡನ ಇರುವಿಕೆ ಸ್ಪಷ್ಟವಾಗಿ ಗೋಚರವಾಯಿತು. ನಂತ್ರ ತುಳಸೀಕಟ್ಟೆಯಲ್ಲಿ ತೆಂಗಿನಕಾಯಿಯಿಟ್ಟು ಆತನನ್ನು ನಂಬಲು ಆರಂಭವಾಗಿ ಕ್ರಮೇಣ ಒಂದು ಗುಡಿ ನಿರ್ಮಿಸಿ ಇಂದಿಗೆ ಹಲವು ವರ್ಷಗಳೇ ಸಂದಿವೆ. ಸಾವಿರಾರು ಭಕ್ತರ ಕಷ್ಟ ಕಾರ್ಪಣ್ಯಗಳು ಕಲ್ಕುಡನ ಅನುಗ್ರಹದಿಂದ ದೂರಾಗಿವೆ!

ಕೋಲ ಮತ್ತು ಸ್ನೇಹಿತರಾದ ಸುಧೀರ್ ಪೂಜಾರಿ
ಕಾಲೇಜು ದಿನಗಳಲ್ಲಿ ಅಂಬಲಪಾಡಿಯ ಸುಧೀರ್ ಪೂಜಾರಿ ಎನ್ನುವವರ ಪರಿಚಯ ಮತ್ತೊಬ್ಬ ಸ್ನೇಹಿತರ ಮೂಲಕ ನನಗಾಯ್ತು. ಬಾಪರೆ.. ಇವರಿಗೆ ಕೋಲಾರಾಧನೆ ಕುರಿತು ನನಗಿಂತ ಹೆಚ್ಚು ಹುಚ್ಚು.ಈ ಹುಚ್ಚು ನಮ್ಮನ್ನು ಅದೆಷ್ಟೋ ಕಡೆಗಳಿಗೆ ಕರೆದುಕೊಂಡು ಹೋಗಿದೆ. ಆ ದಿನಗಳಲ್ಲಿ ಕೋಲದ ಕುರಿತು ಬಟ್ಟೆ ಬ್ಯಾನರ್ ಮೂಲಕ ಪ್ರಚಾರ ಪಡಿಸುತ್ತಿದ್ದರು. ನಾನು ನನ್ನ ಪಾಡಿಗೆ ಅವರು ಅವರ ಪಾಡಿಗೆ ಒಂದು ಪುಟ್ಟ ಡೈರಿಯಲ್ಲಿ ಸಮಯ, ದಿನಾಂಕ, ಕ್ಷೇತ್ರ ಬರೆದಿಟ್ಟುಕೊಂಡು ನಾವಿಬ್ಬರೂ ಸಿಕ್ಕಾಗ ಈ ಬಗ್ಗೆ ಮಾತನಾಡಿ ವೀಕ್ಷಿಸಲು ಹೊರಡುತ್ತಿದ್ದೆವು. ಹೀಗೆ ನನ್ನ ಪದವಿ ದಿನಗಳಲ್ಲಿ ಕೋಲ ನೋಡಿದ ಲೆಕ್ಕ ನನಗಿಲ್ಲ !
ಕಲ್ಕುಡ ಮನೆ ಮತ್ತು ನನ್ನಮ್ಮನ ಹರಕೆ
ನಮಗೆ ಆ ದೈವಸ್ಥಾನದ ಮೇಲೆ ಅಪಾರ ನಂಬಿಕೆ. ಅಲ್ಲಿ ಕಲ್ಕುಡ ನೆಲೆಸಿರುವುದು ಎಷ್ಟು ಸತ್ಯವೋ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ಸಾವಿರಾರು ಭಕ್ತರು ನಂಬಿರುವುದು ಕೂಡ ಅಷ್ಟೇ ಸತ್ಯ.ಭಕ್ತರಿಗೆ ಸಮಾಧಾನ ದೊರಕುತ್ತಿದ್ದದ್ದು ಅಲ್ಲಿ ದರ್ಶನ ಸೇವೆ ನಡೆಸಿಕೊಡುತ್ತಿದ್ದ ಬೀರು ಪಾಣಾರ(Beeru Panara) ಎನ್ನುವ ಪಾತ್ರಿಗಳಿಂದ. ಇವರ ಬಗ್ಗೆ ಇನ್ನೊಂದು ಲೇಖನದಲ್ಲಿ ವಿಸ್ತೃತವಾಗಿ ಬರೆಯುತ್ತೇನೆ, ತಪ್ಪದೆ ಓದಿ..
1997, 98 ರಲ್ಲಿ ನನ್ನಮ್ಮ ಮೊದಲ ಬಾರಿಗೆ UAE ರಾಷ್ಟ್ರಕ್ಕೆ ಉದ್ಯೋಗ ನಿಮಿತ್ತ ತೆರಳಲು ನಿರ್ಧರಿಸುತ್ತಾರೆ. ಆಗೆಲ್ಲ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ.’ಕಾರ್ಯವಾಸಿ ಕತ್ತೆ ಕಾಲು’ ಎನ್ನುವಂತೆ ಯಾರನ್ನೋ ಹಿಡಿದು ಅವರ ಬೆನ್ನು ಬಿದ್ದು ಒಂದಿಷ್ಟು ಕೈ ಬಿಸಿ ಮಾಡಿ ನಮ್ಮ ಕೆಲಸ ಮಾಡಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗೆ ನನ್ನಮ್ಮ ಏಜೆಂಟ್ ಒಬ್ಬನಿಗೆ Passport ನೀಡಿ ಉದ್ಯೋಗ ದೊರಕಿಸಿಕೊಡಲು ವಿನಂತಿಸಿ 10 ಸಾವಿರ ರೂಪಾಯಿ ನೀಡಿದ್ದರು. ಆದರೆ ಅವನಿಂದ ಅದೆಷ್ಟೋ ತಿಂಗಳು ಉತ್ತರವೇ ಬರಲಿಲ್ಲ! ಎಷ್ಟೇ ವಿನಂತಿಸಿದರೂ ಕೊನೆಗೆ ಆತ Passport ಕೂಡ ನೀಡಲಿಲ್ಲ. ಹೀಗಿರುವಾಗ ಅಮ್ಮ ಕಲ್ಕುಡನಿಗೆ ಪ್ರಾರ್ಥನೆ ಮಾಡುತ್ತಾರೆ. ನನ್ನಜ್ಜಿ ಹರಕೆ ಹೇಳಿಕೊಳ್ಳುತ್ತಾರೆ. ಕೆಲವೇ ದಿನಗಳಲ್ಲಿ Passport ಮತ್ತು ಉದ್ಯೋಗ ಎರಡೂ ಸಾಂಗವಾಗಿ ಅಮ್ಮನ ಪಾಲಾಯಿತು.ಈ ಕಾರಣಕ್ಕೆ ಅಮ್ಮ ಹರಕೆಯ ಕೋಲ ಸೇವೆಯನ್ನು ನೀಡಿದ್ದರು.ನಮ್ಮ ಈ ಸೇವೆಯನ್ನು ನೆರವೇರಿಸಿದವರು ಬೀರು ಪಾಣಾರ ಅವರು (ಬೀರು ಪಾತ್ರಿ). ನನಗೆ ಅವರ ಕುರಿತು ಅಂದಿನಿಂದಲೂ ವಿಶೇಷ ಅಭಿಮಾನ. ಸೂಕ್ಷ್ಮವಾಗಿ ಅವರ ದೈವಚಾಕರಿಯನ್ನು ಗಮನಿಸುತ್ತಲೇ ಬಂದಿದ್ದೇನೆ. ದೈವ ಅವಾಹನೆಯಾಗುವಾಗ ಅವರಲ್ಲಾಗುವ ಬದಲಾವಣೆ, ಆಕರ್ಷಣೆ, ಹಾವ ಭಾವ, ಅವರ ನುಡಿ ಎಲ್ಲವೂ ಪರಮ ಸಾಂತ್ವನ ನೀಡುತ್ತದೆ. ನನ್ನ ಮುಂದಿನ ಲೇಖನ ಇವರ ಕುರಿತೇ ಆಗಿರುತ್ತದೆ.

ಕರಾವಳಿ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ದೈವಾರಾಧನೆಯನ್ನು ಜಾತಿ, ಮತ ಮೀರಿ ಎಲ್ಲರೂ ಪೂಜ್ಯ ಭಾವನೆಯಿಂದ ನೋಡುತ್ತಾರೆ. ದೈವದ ವಿರುದ್ಧ ನಡೆದವರ ಪಾಡೇನು? ಎನ್ನುವುದನ್ನು ನಾನು ಬಿಡಿಸಿ ಹೇಳಬೇಕಾಗಿಲ್ಲ. ಅಲ್ಲೊಬ್ಬರು ಕ್ರೈಸ್ತ ಸಮುದಾಯಕ್ಕೆ ಸೇರಿದವರನ್ನು ಉಳ್ಳಾಲದ(Ullal) ಕ್ಷೇತ್ರವೊಂದರಲ್ಲಿ ‘ ಅಂತೋನಿ’ ಎಂದು ದೈವ ಮೊದಲು ಕರೆದರೆ ಕಾಪು ಭಾಗದ ಪ್ರಸಿದ್ಧ ಹಿದಾಯತುಲ್ಲಾ ಸಾಹೇಬರ(Hidayatulla Saheb, Kaup) ನಾದಸ್ವರವೆಂದರೆ ದೈವಕ್ಕೆ ಪ್ರಿಯ. ಹೀಗೆ ನಮ್ಮ ದೈವಾರಾಧನೆಗೆ ಜಾತಿ ಮತದ ಬೇಲಿ ಇಲ್ಲ. ಇಂದಿನ ಪೀಳಿಗೆಗೆ ನಾವು ದೈವಾರಾಧನೆಯ ಮಹತ್ವ ತಿಳಿಸುವ ಮಹತ್ತರ ಕಾರ್ಯ ನಡೆಸಬೇಕಾಗಿದೆ.
ಕೋಲ, ನೇಮ, ದೈವ, ಶಕ್ತಿ, ಪವಾಡ ಎಂದು ಹೇಳಲು ಹೋದರೆ ಸಾವಿರ ಮಾತಿದೆ..
Superb anna✌👌
Superb Avinash👌
ತುಂಬಾ ಚೆನ್ನಾಗಿ ಮೂಡಿ ಬಂದಿದೆ…..ಒಮ್ಮೆ ಮುಳ್ಳು ಗುಡ್ಡೆ ಅಜ್ಜನಬಗ್ಗೆಯೂ ಬರೆಯಿರಿ….
ಅಧ್ಬುತ ಬರಹ ಅವಿನಾಶ್ ಸರ್….👌👌🙏
Super 👌
Avinash, Very well explained about our Kalkuda temple👍
ಅಧ್ಬುತ ಬರಹ ಅವಿನಾಶ್ ಸರ್….👌👌🙏
ನಮ್ಮ ತುಳುನಾಡಿನ ಆಚಾರ-ವಿಚಾರಗಳು, ದೈವಾರಾಧನೆ, ಮನುಜ – ಪ್ರಕೃತಿಯ ನಡುವಣ ಕೊಂಡಿಯಾಗಿರುವ ಈ ದೈವಾರಾಧನೆ ಇವೆಲ್ಲದರ ಬಗೆಗೆ ಮಾಹಿತಿ ಕಲೆಹಾಕಿ ನಮ್ಮೆಲ್ಲರ ಮನಮುಟ್ಟುವಂತೆ ಲೇಖನ ರೂಪದಲ್ಲಿ ತಿಳಿಸುವ ನಿಮ್ಮ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ದೃಶ್ಯ ಮಾದ್ಯಮದ ಮೂಲಕ ಕಾಂತಾರ ಚಿತ್ರದಲ್ಲಿ ರಿಷಭ್ ಶೆಟ್ರು ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಲೋಕಕ್ಕೆ ತಿಳಿಯುವಂತೆ ಮಾಡಿದ್ರೆ, ನಿಮ್ಮಿಂದ ಲೇಖನ ರೂಪದಲ್ಲಿ ಇನ್ನಷ್ಟು ವಿಷಯಗಳು ಅದರ ಮೂಲ ರೂಪದಲ್ಲಿಯೇ ಎಲ್ಲರಿಗೂ ತಿಳಿಯುವಂತಾಗಲಿ.